ಮಗ್ಗಿಯ ಸುಗ್ಗಿ- ಮಗ್ಗಿಯ ಅನುಭವ- ಮಾಹಿತಿ-01

ಮಗ್ಗಿಯ ಸುಗ್ಗಿ- ಲೆಕ್ಕ ಪದ್ಧತಿ ಹೀಗಿತ್ತು ಮೊದಲು.

ಮಗ್ಗಿಯ ಸುಗ್ಗಿ- :ಮಾನವನಿಗೆ ಮೊದಲು ಭಾಷೆಯ ಅರಿವಿರಲಿಲ್ಲ. ಸಂಜ್ಞೆಗಳ ಮೂಲಕ ವ್ಯವಹಾರ ನಡೆಸುತ್ತಿದ್ದ, ಆಂಗಿಕ ಭಾಷೆ ಅಂದರೆ ಕೈ ಸನ್ನೆಗಳ ಮೂಲಕ ಸಂವಹನ ನಡೆಸುತ್ತಿದ್ದ. ನಂತರ ವಿವಿಧ ಭಾಷೆಗಳ ಕಲಿಕೆ, ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳು ಅನೇಕ ಹುಟ್ಟಿಕೊಂಡವು. ಅಕ್ಷರಗಳ ತಿಳುವಳಿಕೆ ಬಂದಿತು. ಹಾಗೆಯೇ ಲೆಕ್ಕ ಅಥವಾ ಗಣಿತದ ಕಲ್ಪನೆ ಬಂದಿತು. ಕನ್ನಡಕ್ಕೆ ಅ, ಆ, ಇ, ಈಗಳು ಹೇಗೋ, ಇಂಗ್ಲಿಷ್‌ ಎ, ಬಿ, ಸಿ, ಡಿ ಹೇಗೋ ಹಾಗೇ ಗಣಿತಕ್ಕೆ ಮಗ್ಗಿಗಳು ಮುಖ್ಯ ಮಗ್ಗಿಯಿಲ್ಲದೆ ಗಣಿತವಿಲ್ಲ. ಗಣಿತವಿಲ್ಲದೆ ಮನುಷ್ಯನ ಜೀವನವೇ ಇಲ್ಲ. ಎಲ್ಲಾ ಲೆಕ್ಕಾಚಾರಗಳೂ ತಲೆಕೆಳಗಾದಂತೆಯೇ ಸರಿ, ಗಣಿತವಿಲ್ಲದಿದ್ದರೆ.

‘ಗಣಿತವೆಂದರೇನೋ ಮಗ್ಗಿ, ಮಗ್ಗಿಯೆಂದರೆನೋ ಗಣಿತ’ ಎಂದು ನಮ್ಮಲ್ಲಿ ಹೇಳಿದ ನೆನಪು ನನಗೆ. ಅದರಲ್ಲೂ ಮನೆಯಲ್ಲಿ ಹಿರಿಯರಿದ್ದಾರೆಂದರೆ, ಆಗಿನ ಕಾಲದಲ್ಲಿ ಮಕ್ಕಳಿಗೆ ಶಾಲೆಗೆ ಹೋಗುವ ಮೊದಲೇ ಅರ್ಧಬಂರ್ಧ ಮಗ್ಗಿಯನ್ನು ಕಲಿಸಿಯೇ ಶಾಲೆಗೆ ಕಳಹಿಸಿಕೊಡುತ್ತಿದ್ದರು. ಈಗಿನಂತೆ ಎಲ್‌ಕೆಜಿ, ಯುಕೆಜಿ ಎನ್ನುವಂತಿರಲಿಲ್ಲ. ತಾಯಂದಿರು ಮಗುವಿಗೆ 4 ವರ್ಷ ಯಾವಾಗ ಆದೀತೋ ಎಂದು ಜಾತಕಪಕ್ಷಿಯಂತೆ ಕಾಯ್ದು ಪ್ರಿ ನರ್ಸರಿ, ಎಲ್‌ಕೆಜಿ, ಯುಕೆಜಿಗೆ ಹಾಕಿಬಿಡುತ್ತಾರೆ. ಆಗಿನ ಕಾಲದಲ್ಲಿ ಹಾಗಿರಲಿಲ್ಲ. 6 ವರ್ಷ ಆಗಿರಬೇಕು. ಕನ್ನಡ ಶಾಲೆಗಳಲ್ಲಿ “ಒಂದನೇ ತರಗತಿಗೆ ಹೆಸರು ಬರೆಸಿ ಬರುತ್ತಿದ್ದರು. ಅದು ಹೇಗೆಂದರೆ ಮನೆಯಲ್ಲಿ ಒಂದು ತಟ್ಟೆಯಲ್ಲಿ ಅಕ್ಷತೆ ಕಾಳು ಹಾಕಿ ದೇವರ ಮುಂದೆ ಇಟ್ಟು ಅದರಲ್ಲಿ ಓಂ ಎಂದು ಮಗುವಿಗೆ ಕೈಯಿಂದ ತಿದ್ದಿಸಿ ಗಣಪತಿಗೆ ನಮಸ್ಕರಿಸಿ ಹೋಗುತ್ತಿದ್ದರು.

ಕನ್ನಡ ಶಾಲೆಗಳೆಂದರೆ ಆಗ ದೇವಾಲಯಗಳಿದ್ದಂತೆ. ಅಲ್ಲಿನ ಗುರು, ಮಾತೆಯರು ದೇವರಿದ್ದಂತೆ ಎಂಬ ಕಾಲವಿತ್ತು ಆಗ ಮಕ್ಕಳ ಮನದಲ್ಲಿ ನನಗೂ ನೆನಪಿದೆ. ನನ್ನಜ್ಜ ನನ್ನನ್ನು ಆಗಸ್ಟ್ 15ರಂದು ಕರೆದುಕೊಂಡು ಹೋಗಿ ಕನ್ನಡ ಶಾಲೆಯಲ್ಲಿ ಗುರುಗಳ ಮುಂದೆ ನಿಲ್ಲಿಸಿದಾಗ ನನ್ನ ಎಡ ಕಿವಿಗೆ ನನ್ನ ಬಲಗೈಯನ್ನು ತಲೆಯ ಮೇಲಿಂದ ತಂದು ಮುಟ್ಟಿಸಿ ಹೆಸರು

ದಾಖಲಿಸಿಕೊಂಡದ್ದು, ನನ್ನಜ್ಜ ಒಂದು ತೆಂಗಿನ ಕಾಯಿ 4 ಸೇರು ಮಂಡಕ್ಕಿಯನ್ನು ಗುರುಗಳಿಗೆ ಕೊಟ್ಟಾಗ ಅವರು ಸ್ವಾತಂತ್ರ್ಯದ ದಿನವಾದ್ದರಿಂದ ಗಾಂಧೀ ಫೋಟೋದ ಮುಂದೆ ಕಾಯಿ ಒಡೆದು ಕೊಬ್ಬರಿ ಮಂಡಕ್ಕಿ ಎಲ್ಲವನ್ನು ಹಂಚಿ, ಅವತ್ತಿನಿಂದ ಹಿಂದೆ 6 ವರ್ಷಗಳವರೆಗೆ ಲೆಕ್ಕ ಹಾಕಿ 1976 ಎಂದು ದಾಖಲಿಸಿಕೊಂಡದ್ದು. ನನ್ನ ಜನನ ಸ್ವಾತಂತ್ರ್ಯದ ದಿನವೇ ಎಂದು ರುಜುವಾಗಿಬಿಟ್ಟಿತು. ಎಷ್ಟೋ ವರ್ಷಗಳ ನಂತರ ಗೊತ್ತಾಯಿತು, ನಾನು ಶುದ್ದ ಯುಗಾದಿ-ಅಮಾವಾಸ್ಯೆ ದಿನ ಹುಟ್ಟಿದ್ದು. ಅಣ್ಣನಿಗಿಂತ 3 ವರ್ಷ ಹಿಂದಿನವಳೆಂದು ಅಣ್ಣನ ಜಾತಕ ನೋಡಿದಾಗ ಗೊತ್ತಾಯಿತು. ಹಾಗಾದರೆ ಗುರುಗಳು ಲೆಕ್ಕ ತಪ್ಪಿದರೋ ಅಜ್ಜನೇ ತಪ್ಪಿದನೋ

ಗೊತ್ತಾಯಿತು. ಹಾಗಾದರೆ ಗುರುಗಳು ಲೆಕ್ಕ ತಪ್ಪಿದರೋ ಅಜ್ಜನೇ ತಪ್ಪಿದನೋ ನನಗಂತೂ ಇನ್ನೂ ತಿಳಿಯದು. ಅಜ್ಜನೇ ಅಜಮಾಸ ಲೆಕ್ಕ ಹೇಳಿದಾಗ ಅಡ್ಮಿಶನ್ ಮಾಡಿಕೊಂಡಿದ್ದರು ಎನ್ನಿ. ಅದೇನೇ ಇರಲಿ, ಗುರುಗಳ ಬಗ್ಗೆ ತಪ್ಪು ಹೇಳುವುದು ಸಮಂಜಸವಲ್ಲ. ಅವರು ನಮಗೆ ಮಗ್ಗಿಗಳನ್ನು ಹೇಳಿ ಕೊಡುವಾಗ ಲೆಕ್ಕ ಹೇಗೆ ತಪ್ಪುತ್ತಾರೆ ಹೇಳಿ.

ಅಂದ ಹಾಗೆ ಮಗ್ಗಿಯೂ ಮನುಷ್ಯನ ಜೀವನದಲ್ಲಿ ಯಾವಾಗ ಪ್ರಾರಂಭವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆಗಿನ ಕಾಲದಲ್ಲಿ ನಮಗೆ ಪ್ರೈಮರಿ ಸ್ಕೂಲಿನಲ್ಲಿ ನಮ್ಮ ಗುರುಗಳು ಬಾಯಿಪಾಠ ಮಾಡಿಸುತ್ತಿದ್ದರು. 2ರ ಮಗ್ಗಿಯಿಂದ ಎಷ್ಟು ಸಾಧ್ಯವೋ ಅಷ್ಟು ಹೇಳಿ ಒಪ್ಪಿಸಬೇಕು. ಇಲ್ಲದಿದ್ದರೆ ಕೈ ಮೇಲೆ ಬಾಸುಂಡೆ ಏಟುಗಳು ಛಡಿಗಳಿಂದ ಬೀಳುತ್ತಿದ್ದವು. ಹಾಗಾಗಿ ಮಗ್ಗಿ ಪುಸ್ತಕ ಎರಡೊಂದ ಎರಡು, ಎರಡೆಳ್ಳೆ ನಾಲ್ಕು ಎಂದು ಬಾಯಿಪಾಠ ಮಾಡುತ್ತಿದ್ದೆವು ಮನೆಯ ಮೂಲೆ ಮೂಲೆಯಲ್ಲಿ ಕುಳಿತು.

ಓಡಾಡುವವರ ಯಾರ ಕಾಲಿಗೂ ಅಡ್ಡ ಬರಬಾರದೆಂದೂ, ಅಥವಾ ಮೂಲೆಯಲ್ಲಿ ಕುಳಿತು ಜೋರಾಗಿ ಹೇಳುವಾಗ ಏಕಾಂತ ಬರುತ್ತದೆಂದೋ ನನಗಂತೂ ಗೊತ್ತಿಲ್ಲ. ಅದರ ಅರಿವಿರದೆ ಮೂಲೆ ಮೂಲೆಯಲ್ಲಿಯೂ ಮಗ್ಗಿಗಳನ್ನು ಹೇಳುವ ತಾಲೀಮು ನಡೆಯುತ್ತಿತ್ತು. “ಎಲ್ಲ ಕೇಳಲಿ ಎಂದು ನಾನು ಹೇಳುವುದಿಲ್ಲ. ಹೇಳುವುದು ಅನಿವಾರ್ಯ ಕರ್ಮ ಎನಗೆ” ಎಂಬಂತೆ ಯಾರು ಕೇಳದಿದ್ದರೂ ಸರಿಯೇ ನಾವು ಕುಳಿತುಕೊಂಡ ಮೂಲೆಗಳಂತೂ ಕೇಳಿಸಿಕೊಳ್ಳುತ್ತಿದ್ದವು ಎನ್ನಿ.

ನಮ್ಮ ಮನೆಯ ಅಜ್ಜ ಆಗಿನ ಕಾಲದಲ್ಲಿ ಮುಲ್ಕಿ ಪರೀಕ್ಷೆ ಪಾಸಾದವರು. ಹಾಗಾಗಿ ಅವರಿಗೆ ಬಾಯಿಯಲ್ಲಿಯೇ ಭಾಗಾಕಾರ, ಗುಣಾಕಾರ ಎಲ್ಲವೂ ಸ್ಪಷ್ಟ ಕಾಲ ಕಾಲ ಕಾಲ, ಕಾಲ ಕಾಲ ಮುಕ್ಕಾಲು, ಕಾಲ ಕಾಲ ಅರ್ದ, ಕಾಲ ಕಾಲ ಒಂದು ಇದು ನನಗೆ ದೊಡ್ಡವಳಾಗುವವರೆಗೂ ಸರಿ ಹೊಂದಲಿಲ್ಲ. ನಮ್ಮ ಮನೆಯಲ್ಲಿ ಅಕ್ಕ ಮಾತ್ರ ಎಲ್ಲ ವಿಷಯಗಳಲ್ಲಿ ನಂ1 ಸ್ಥಾನದಲ್ಲಿ.

ಏಕೆಂದರೆ ನನ್ನ ತಾಯಿಯ ತಂಗಿ ಅಂದರೆ ಚಿಕ್ಕಮ್ಮನಿಂದ ಎಲ್ಲ ವಿಷಯಗಳನ್ನು ಅವಳು ಮೊದಲೇ ಹೇಳಿಸಿಕೊಳ್ಳುತ್ತಿದ್ದಳು. ನನ್ನಕ್ಕನಿಗೆ ಮಗ್ಗಿ, ಗಣಿತ, ಇಂಗ್ಲಿಷ್, ಹಿಂದಿ, ಕನ್ನಡ ಎಲ್ಲವೂ ಸುಲಲಿತ. ಅದರಲ್ಲೂ ಗಣಿತ ಎಂದರೆ ಅವಳಿಗೆ ಲಾಲಿಪಾಪ್ ಇದ್ದ ಹಾಗೆ. 3ನೇ ಕ್ಲಾಸಿನಲ್ಲೇ 30ರ ತನಕ ಮಗ್ಗಿಯನ್ನು ಕಣ್ಣು ಮುಚ್ಚಿಕೊಂಡೇ ಹೇಳುತ್ತಿದ್ದಳು. ಅಂದರೆ ಕಣ್ ತೆರೆದರೆ ಬರುತ್ತಿರಲಿಲ್ಲ ಎಂದಲ್ಲ, ಅಷ್ಟು ಸುಲಭವಾಗಿ ನೀರು ಕುಡಿದಂತೆ ಹೇಳುತ್ತಿದ್ದಳು. ಜಾಣೆಯಾದ ಅವಳನ್ನು ಶಾಲೆಯಲ್ಲಿ ಲೀಡರ್ ಮಾಡಿದ್ದರು.

ಹೀಗೆ ಒಂದು ದಿನ ಸ್ಕೂಲಿಗೆ ಸಾಹೇಬರು ಬಂದಾಗ ಮಗ್ಗಿಗಳನ್ನು ಇವಳ ಕಡೆಯಿಂದ ಹೇಳಿಸಿದಾಗ ಕೇಳಿದ ಸಾಹೇಬರು ತುಂಬಾ ಖುಷಿಯಾದರಲ್ಲದೆ ಜೊತೆಗೆ ಒಂದು ಪ್ರಶ್ನೆ ಕೇಳಿದರು. ಇವಳಿಗೆ ಮಾತ್ರ 30 ತನಕ ಮಗ್ಗಿ ಬರುತ್ತದೆ. ಉಳಿದ ಮಕ್ಕಳಿಗೇಕೆ ಬರುವುದಿಲ್ಲ ಎಂದರು. ಆಗ ಟೀಚರಮ್ಮ, ಮಾತನ್ನು ತೇಲಿಸಿ ಅವರ ಮನೆಯಲ್ಲಿ ಎಲ್ಲರೂ ಓದಿದವರುಂಟು, ಹೇಳಿಕೊಡುತ್ತಾರೆ ಎಂದು ಪರಿಸ್ಥಿತಿಯಿಂದ ಜಾರಿಕೊಂಡದ್ದುಂಟು.

ಆದರೆ ಅಪ್ಪ ಅಪ್ಪಟ ರೈತ. ಬಿಡುವಿಲ್ಲದ ಕೆಲಸ. ಅಮ್ಮ 4ನೇ ಕ್ಲಾಸ್ ಓದಿದ ಗೃಹಿಣಿ. ಅದರಲ್ಲೂ ವಿಕಲಚೇತನೆ. ಐದು ಮಂದಿ ಮಕ್ಕಳಿಗೆ ಊಟ, ಅಡುಗೆ ಇತ್ಯಾದಿ ಕೆಲಸದಲ್ಲಿ ಅವಳೆಂದೂ ನಮಗೆ ಪುಸ್ತಕ ಹಿಡಿಸಿ ಓದಿಸಿದವರಲ್ಲ ಎಂಬುದು ನಮಗೆಲ್ಲ ತಿಳಿದ ಸತ್ಯ ಸಂಗತಿ. ಅಕ್ಕ ಎಲ್ಲದರಲ್ಲೂ ಎತ್ತಿದ ಕೈ. ಗಣಿತದಲ್ಲೂ ಅಷ್ಟೇ. ನನಗೆ 2ರ ರವರೆಗೆ ಅಲ್ಲ 15ರವರೆಗೂ ಹೇಳಬೇಕಾದರೆ ಬಾಯಿಪಾಠ ಮಾಡಿ ದಿನವೂ ಹೇಳಿದರೂ ಮತ್ತದೇ ತಪ್ಪು ಲೆಕ್ಕ ಬರುತ್ತಿತ್ತು. ಈಗಿನ ತನಕವೂ ಕಾಲು, ಕಾಲು, ಕಾಲು ಮುಕ್ಕಾಲು ಹೇಳುವಾಗ ನನ್ನಕ್ಕನಿಗೆ ಅದೆಷ್ಟು ಬಾರಿ ಕೇಳುತ್ತೇನೆಯೋ ತಿಳಿಯದು. ಅದು ಈಗಲೂ ನನಗೆ ಕಗ್ಗಂಟು.

ನನಗೀಗಲೂ 20ರವರೆಗೆ ಹೇಳುವಾಗ ಬಾಯಿ ಎಡರು ತೊಡರು. ಅದಲ್ಲ ವಿಷಯ 2ರಿಂದ 20 ರವರೆಗೆ ಬಂದರೇನು? 30 ತನಕ ಬಂದರೇನು? ಅದು ಅವರವರ ಬುದ್ಧಿಮತ್ತೆ ಅಷ್ಟೆ ಆದರೆ ಇಲ್ಲೊಂದು ವಿಶೇಷ ಸಂದರ್ಭವನ್ನು ಹೇಳಲೇಬೇಕು. ನಮ್ಮ ಸೀನಿಯರ್ ಒಬ್ಬರು ಸುಮಾ ಎಂಬವರಿದ್ದರು. ಧಾರವಾಡದಲ್ಲಿ ಅವರ ಪ್ರೈಮರಿ ಶಿಕ್ಷಣವಾಗಿತ್ತು. ಓದುವಾಗ ಅವರಿಗೆ 20ರ ತನಗೆ ಮಗ್ಗಿ ಅರಳು ಹುರಿದಂತೆ ಬಾಯಿಪಾಠ. ಆದರೆ ಒಂದು ಸಣ್ಣ ಸಮಸ್ಯೆ ಇತ್ತು. 16ರ ಮಗ್ಗಿ ಒಂದನ್ನು ಬಿಟ್ಟು ಉಳಿದೆಲ್ಲವೂ ಬಾಯಿಪಾಠ. ಅಲ್ಲಿ ಮಹಂತೇಶ ಎಂಬವರು ಶಾಲಾ ಹೆಡ್‌ಮಾಸ್ಟರ್, ಮುಲ್ಲಾ ಸರ್ ಎಂಬವರು ಕ್ಲಾಸ್ ಟೀಚರ್. ದೃಢಕಾಯದ ಒಳ್ಳೆಯ ಪರ್ಸನಾಲಿಟಿ ಹೊಂದಿದ್ದ 35ರ ತರುಣ. ಆಕರ್ಷಕ ವ್ಯಕ್ತಿ. ಹಾಗೆ ಬುದ್ದಿವಂತ ಗುರುಗಳು.

ಅಲ್ಲಿಯ ವ್ಯವಸ್ಥೆ ಹೇಗಿತ್ತೆಂದರೆ ದಿನವೂ ಬೆಳಗ್ಗೆ ಪ್ರಾರ್ಥನೆ ಮುಗಿದ ಬಳಿಕ ಮಗ್ಗಿಗಳನ್ನು ಹೇಳಿಸುತ್ತಿದ್ದರು. ಒಬ್ಬರಿಂದ ಅಥವಾ ಇಬ್ಬರಿಂದ ಒಂದೊಂದು ಸಾಲಿನಂತೆ ಪ್ರಾರ್ಥನೆ ಮುಗಿದ ಕೂಡಲೇ ಸರ್ ಸುಮಾ 16ನೇ ಮಗ್ಗಿ ಹೇಳು ಎಂದಾಗ ಹುಡುಗಿ ಕಕ್ಕಾಬಿಕ್ಕಿ. ಯಾಕೆಂದರೆ ಎಲ್ಲವೂ ಬರುತ್ತದೆ 16ರ ಮಗ್ಗಿ ಎಂದರೆ ಎಡರು-ತೊಡರು.

ಹದಿನಾರೊಂದು ಹದಿನಾರು, ಹದಿನಾರೆಡ್ಡಿ 32 ಅಲ್ಲಿಗೇ ಸ್ಟಾಪ್. ಮಾಸ್ಟ್ರಿಂದ ಛಡಿಯೇಟು ತಿಂದು ಸುಮ್ಮನೆ ಮರಳುವ ಪ್ರಸಂಗ. ಅದಾದ ಮೇಲೆ ಪ್ರೇಯ‌ರ್ ತಪ್ಪಿಸಿಕೊಂಡು ಕ್ಲಾಸಿಗೆ ಹೋಗಲು ಶುರು ಮಾಡಿದಾಗ ಅದು ಹೇಗೋ ಸರ್‌ಗೆ ಗೊತ್ತಾಗಿ ಬೈದಾಗ ಸುಮಾ ಬೆಪ್ಪಳಾಗಿ ನಿಲ್ಲಬೇಕಾಯಿತು. ಆಮೇಲೆ ಕ್ಲಾಸ್‌ನ ಹುಡುಗರೆಲ್ಲಾ 16ರ ಮಗ್ಗಿ ಸುಮಾ ಎಂದು ಛೇಡಿಸತೊಡಗಿದಾಗ ಸುಮಾಳಿಗೆ ಸಿಟ್ಟು, ಹತಾಶೆ ಆದರೂ ಬಡವನ ಕೋಪ ದವಡಗೆ ಮೂಲ ಎಂಬಂತೆ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ.

ಹೀಗೆ ಒಂದು ಸಾರಿ ಸುಮಾಳಿಗೆ ಜ್ವರ ಬಂದಾಗ ಅವಳ ತಾಯಿ ಅಲ್ಲೇ ಇರುವ ಬಾವಿಕಟ್ಟೆ ಡಾಕ್ಟರ್ ಹತ್ತಿರ ಕರೆದೊಯ್ದರು. ಡಾಕ್ಟರ್ ಎಲ್ಲಾ ರೀತಿಯ ತಪಾಸಣೆ ಮಾಡಿ ಇನ್ನೇನು ಇಂಜೆಕ್ಷನ್ ಕೊಡಬೇಕು ಅದಕ್ಕಾಗಿ ಮಕ್ಕಳ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಶ್ನೆ ಕೇಳುವುದು ರೂಢಿ. ಹಾಗೆ ಅವರು ಏನು ಓದುತ್ತೀಯಾ? ಎಷ್ಟನೇ ತರಗತಿ? ಎಂದರು. ಐದನೇ ಕ್ಲಾಸು ಎಂದಳು. ಮಗ್ಗಿ ಬರುತ್ತದಾ? ಎಷ್ಟರವರೆಗೆ ಬರುತ್ತದೆ ಎಂದಾಗ ಇಡಿಯಾಗಿ 20ರ ತನಕ ಬರುತ್ತದೆ ಎಂಬ ಮಾತು ಬಾಯಿಂದ ಹೊರ ಬೀಳುವುದೇ ತಡ ಹಾಗಾದರೆ 16ರ ಮಗ್ಗಿ ಹೇಳು ಎಂದೆನ್ನಬೇಕೆ ಡಾಕ್ಟರ್ ಮಹಾಶಯ.

ಅಷ್ಟರಲ್ಲಾಗಲೇ ಡಾಕ್ಟರ್ ಗಪ್ ಚುಪ್ ಆಗಿದ್ದ ಸುಮಾಳಿಗೆ ಇಂಜೆಕ್ಷನ್ ಚುಚ್ಚಿಯೇ ಬಿಟ್ಟಿದ್ದ. ಅವಳಿಗಾದ ನೋವಿಗೆ ಜೋರಾಗಿ ಅತ್ತಾಗ ಅವಳಮ್ಮ ನೋವಿನ ಜಾಗವನ್ನು ಮೆಲ್ಲನೆ ನೀವಿದ್ದಳು. ಆದರೆ ಸುಮಾಳಿಗೆ ಇಂಜೆಕ್ಷನ್ ಚುಚ್ಚಿದ ನೋವಿಗಿಂತ ಜಾಸ್ತಿ 16ರ ಮಗ್ಗಿ ಬರುವುದಿಲ್ಲ ಎಂಬುದೇ ನೋವನ್ನುಂಟು ಮಾಡಿತ್ತು. ಒಟ್ಟಿನಲ್ಲಿ ಸುಮಾಳಿಗೆ 16ರ ಮಗ್ಗಿಯ ಸರದಿ ಬಂದಾಗ ಮಾತ್ರ ಬಾಯಿ ತೆರೆಯದೆ ಶಿಲಾ ಬೊಂಬೆಯಂತೆ ನಿಲ್ಲುತ್ತಿದ್ದುದಂತೂ ಸುಳ್ಳಲ್ಲ.

ಮುಂದೆ ಅವರ ತಾಯಿಯ ತವರು ಮನೆ ಹೆಬ್ಬಾಳ ಎಂಬ ಗ್ರಾಮ. ಸುಮಾಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಲ್ಲಿ ಅಡ್ಮಿಶನ್ ಮಾಡಿಸಲಾಯಿತು. 6ನೇ ತರಗತಿಗೆ ಸೇರಿದ ಧಾರವಾಡದಿಂದ ಆ ಹಳ್ಳಿ ಹೆಬ್ಬಾಳಕ್ಕೆ ಹೋದಾಗ ಉಳಿದೆಲ್ಲ ಹಳ್ಳಿ ಮಕ್ಕಳು ಇವಳನ್ನು ಮಿಕ-ಮಿಕ ನೋಡುತ್ತಿದ್ದರು. ಪೇಟೆಯಿಂದ ಹಳ್ಳಿಗೆ ಬಂದ ಹುಡುಗಿಯೆಂದು ಒಂದು ಕಡೆಯಾದರೆ 20ರ ತನಕ ಮಗ್ಗಿಗಳನ್ನು ಅರಳು ಹುರಿದಂತೆ ಹೇಳುತ್ತಾಳೆ ಎಂಬುದು ಇನ್ನೊಂದು.

ಅಲ್ಲಿ ರೇವಣಪ್ಪ ಸರ್ ಎಂಬವರು ಸುಮಾ ಪುಟ್ಟ ಇಲ್ಲಿ ಬಾ, ಮಗ್ಗಿ ಎಲ್ಲಿಯವರೆಗೆ ಬರುತ್ತದೆ ಎಂದಾಗ 20ರವರೆಗೆ ಸರ್ ಎಂದಳು. ಆಗ ಸರಿ ಬಾ ಮಗ್ಗಿ ಹೇಳು ಎಂದರೆ ಖುಷಿಯಿಂದಲೇ ಎರಡು ಒಂದಲೇ ಎರಡು ಎಂದು ಹೇಳುತ್ತಾ 15ರವರೆಗೆ ಮಗ್ಗಿ ಹೇಳಿಯಾಯಿತು ಎನ್ನುವಾಗಲೇ ಅವಳಿಗೆ ನಿಜವಾದ ತಲೆನೋವು ಶುರುವಾಯಿತು. 16ರ ಮಗ್ಗಿ ಬಂದೊಡನೆ ಕರೆಂಟ್ ಹೊಡೆದ ಕಾಗೆ ತರಹ ಸ್ಟಕ್ ಆಗಿ ಬಿಡುತ್ತಿದ್ದಳು.

ಅದೆಲ್ಲ ಮುಗಿಯಿತು ಎನ್ನುವಾಗ ಹೆಬ್ಬಾಳದಲ್ಲಿ ಇವರ ಅಪ್ಪ ಅಮ್ಮನಿಗೆ ಆತ್ಮೀಯ ಹಾಗೂ ತುಂಬಾ ಪರಿಚಯವಿರುವ ಹಾಲಪ್ಪಜ್ಜ ಎನ್ನುವ ಅಜ್ಜ ಸುಮವ್ವ, ಬಾರವ್ವ ಇಲ್ಲಿ. ಸ್ಕೂಲಿಗೆ ನೀನೇ ಫಸ್ಟ್ ಅಂತಲ್ಲವ್ವಾ.. ಅಂದಾಗ ಆಕೆಗೆ ಖುಷಿಯೋ ಖುಷಿ. ಮುಂದೆ ಎಷ್ಟರವರೆಗೆ ಮಗ್ಗಿ ಬರುತ್ತದ ಬೇ ಎಂದಾಗ 20ರವರೆಗೆ ಎಂದಳು. ಆಗ ಹಂಗಾರೆ 16 ಮಗ್ಗಿ ಹೇಳವ್ವ ಎಂದು ಅಜ್ಜ ಹೇಳಿದಾಗ ಆಕೆಯ ಖುಷಿಯೆಲ್ಲ ನೀರಾಗಿ ಹೋಗಿತ್ತು. ಆದರೂ ಸುಮಾ ಹಠಮಾಡಿ ಕುಳಿತು 16 ರ ಮಗ್ಗಿ ಬಾಯಿಪಾಠ ಮಾಡಿದರೂ. 16ರ ಮಗ್ಗಿ ಸುಮಾ ಎಂಬ ಹೆಸರು ಅವಳನ್ನು ಬಿಟ್ಟು ಹೋಗದೇ ಶಾಶ್ವತವಾಗಿತ್ತು.

ಆದರೂ ಗಟ್ಟಿ ಮನಸ್ಸು ಮಾಡಿಕೊಂಡ ಸುಮಾ ತನ್ನ ಸಹಪಾಠಿ ಕುಲಕರ್ಣಿಗೆ ಮಾತ್ರ ತರಗತಿಯ ನಂ1 ಸ್ಥಾನವನ್ನು ಬಿಟ್ಟು ಕೊಡಲಿಲ್ಲ. ಅದರಲ್ಲೂ ಗಣಿತ ಎಂಬುದು ಹೆಚ್ಚಿಗೆ ಅಂಕ ಪಡೆಯುವ ವಿಷಯ. ಇದನ್ನು ನೆನೆಸಿಕೊಂಡಾಗಲೆಲ್ಲ ನನ್ನ ಮಗ ಕಣ್ಣನಿಗೆ ಮೊನ್ನೆ ಮಗ್ಗಿ ಕಂಠಪಾಠ ಮಾಡಿಸುತ್ತಿದ್ದೆ. ಹೇಳುತ್ತಾ, ಹೇಳುತ್ತಾ 15ರ ತನಕ ಹೇಳಿದ್ದೆ. 16ರ ಮಗ್ಗಿ ಹೇಳುತ್ತಿದ್ದಂತೆ ಬಾಯಿ ಏಕೋ ಎಡರು-ತೊಡರು ಆದಂತಾಯಿತು.

ನನಗೇಕೋ ಸುಮಕ್ಕನ ಅಂಟು ರೋಗ ನನಗೂ ಬಂದಿತಾ ಎಂದು ಯೋಚಿಸುತ್ತಾ ಪದೇ ಪದೇ ಹೇಳಿಯೂ, ಹೇಳದೆಯೂ ಹಾಗೇ ಆಗತೊಡಗಿತು. ಯಾಕೋ ರಾಮೇಶ್ವರಕ್ಕೆ ಹೋದರೂ ಶನೀಶ್ವರನ ಕಾಟ ತಪ್ಪಲಿಲ್ಲ ಎನ್ನುವಂತೆ 16ರ ಮಗ್ಗಿ ನನಗೂ ತಪ್ಪತೊಡಗಿದೆ. ನಾನು ನಿಮ್ಮ ಮುಂದಷ್ಟೇ ಈ ವಿಷಯ ಹೇಳುತ್ತಿದ್ದೆನೆ. ಯಾವುದಕ್ಕೂ ಗೌಪ್ಯವಿರಲಿ, ಶ್! ಶ್!….

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!