Summary of the poem-06 ಅಖಂಡ ಕರ್ನಾಟಕ, ಕವಿ ಕುವೆಂಪು
Summary of the poem-06– ಸಾರಾಂಶ :
ನಮ್ಮದು ಅಖಂಡವಾದ ರಾಜ್ಯ. ಇದು ಕೇವಲ ರಾಜಕೀಯ ನಾಟಕವಲ್ಲ. ಪ್ರತಿಯೊಬ್ಬ ಕನ್ನಡಿಗನ ಮಾತಿದು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನ ಆಶೀರ್ವಾದ ನಮ್ಮ ಮೇಲಿದೆ. ಋಷಿಮುನಿಗಳ ಪರಂಪರೆ ನಮ್ಮ ನಾಡಿಗಿದೆ. ಕನ್ನಡತನ ಏಕತೆಯಿಂದ ಮೂಡಿಬಂದ ಸ್ವರೂಪವಾಗಿದೆ. ಕನ್ನಡಾಂಬೆ ಬಂಜೆಯಲ್ಲ, ಭೂಮಂಡಲವೇ ಅವಳನ್ನು ಪೂಜಿಸುತ್ತದೆ. ನೂರುಕೋಟಿ ಕನ್ನಡ ಮನಸ್ಸುಗಳ ದೊಡ್ಡ ಕನಸು ಆಸೆ ಆಕಾಂಕ್ಷೆಯೇ ಇದಾಗಿದೆ. ಯಾರ ವೈಯಕ್ತಿಕ ವಿಚಾರಗಳೂ ಇದರಲ್ಲಿಲ್ಲ.
ಕನ್ನಡ ನಾಡು ಎಂಬುದು ಬೂಟಾಟಿಕೆಯ ನಾಟಕವಷ್ಟೇ ಅಲ್ಲ. ಇಂದು ನಿರ್ಮಿಸಿ ನಾಳೆ ಕಿತ್ತು ಬಿಸಾಡುವಂತಹ ಸರ್ಕಾರಗಳಲ್ಲ. ಇದಕ್ಕೆ ಪರಂಪರೆ ಇದೆ. ಕನ್ನಡದ ಸಾಂಸ್ಕೃತಿಕ ಪರಂಪರೆಗೆ ಒಂದು ಇತಿಹಾಸವೇ ಇದೆ. ಇಲ್ಲಿ ನೃಪತುಂಗನೇ ಚಕ್ರವರ್ತಿ, ಪಂಪನೇ ಮುಖ್ಯಮಂತ್ರಿ, ರನ್ನ ಜನ್ನ ನಾಗವರ್ಮ, ರಾಘವಾಂಕ, ಹರಿಹರ, ಬಸವೇಶ್ವರ, ನಾರಣಪ್ಪ, ಸರ್ವಜ್ಞ, ಷಡಕ್ಷರ ಮೊದಲಾದವರೆಲ್ಲ ಮಂತ್ರಿಮಂಡಲದ ಸದಸ್ಯರಾಗಿದ್ದಾರೆ.ಇದು ಸರಸ್ವತಿಯೇ ರಚಿಸಿದ ಸಚಿವ ಮಂಡಲ. ಇದನ್ನು ಕವಿಯು ಸರಸ್ವತಿಯ ವಜ್ರ ಕರ್ಣಕುಂಡಲ ಎಂದು ಹೇಳುತ್ತಾರೆ.
ಅಖಂಡ ಕರ್ನಾಟಕ ರಚಿತವಾದುದು ಕೇವಲ ಹೊಟ್ಟೆ ಬಟ್ಟೆಗಾಗಿ, ಜಾತಿ ಪಕ್ಷಗಳ ಕಲಹಕ್ಕಾಗಿ ಅಲ್ಲ. ಹಮ್ಮು-ಬಿಮ್ಮು ಅಹಂಕಾರಕ್ಕಲ್ಲ, ಬಣ್ಣದ ಚಿಟ್ಟೆಯಂತೆ ಬೆಡಗು ತೋರಲಿಕ್ಕಲ್ಲ, ಹೊಟ್ಟೆಪಾಡಿಗೆ ಅಲ್ಲ, ಅಹಂಕಾರ ಸ್ವಾರ್ಥಕ್ಕೆ ಅಲ್ಲ. ರಾಜಕೀಯ ಅಧಿಕಾರ ಎಂಬುದು ಕಾರ್ಕೋಟಕ ವಿಷದಂತೆ. ಇಲ್ಲಿ ಸ್ವಾರ್ಥದ ಮೇಲಾಟದ ವ್ಯವಸ್ಥೆ ಇದೆ. ಆದರೆ ಇದರ ಬದಲಾಗಿ ಕರ್ನಾಟಕ ಇರುವುದು ಏಳಿಗೆಗಾಗಿ ಎಂದು ಹೇಳುತ್ತಾರೆ.
ಅಖಂಡ ಕರ್ನಾಟಕಕ್ಕೆ ಅದರದೆ ಆದ ಇತಿಹಾಸವಿದೆ. ಆತ್ಮ ಸಂಸ್ಕೃತಿಯನ್ನು ಮೆರೆಯಲು ಅದರ ಕಾಂತಿಯನ್ನು ಬೆಳಗಲು ಭಗವಂತನ ಚರಣದ ಕಾಂತಿಯನ್ನು ಹೆಚ್ಚಿಸಲು ಶರಣರು ತಮ್ಮ ಉಸಿರಿನಲ್ಲಿ ಹತ್ತಿಸಿದ ಹಣತೆ ಕನ್ನಡಿಗನ ಎದೆಯಲ್ಲಿ ಬೆಳಗಲಿ ಅಂದರೆ ಕನ್ನಡಿಗನ ಬಾಳೆಂಬ ಹಣತೆ ಆರದಂತೆ ಸದಾ ಬೆಳಗಲಿ. ಇದು ಭಗವಂತನ ಕಣ್ಣಿಗೂ ಬೀಳುವಂತಾಗಬೇಕು.
ಕೆಲವೊಮ್ಮೆ ಅಧಿಕಾರದ ಮದದಲ್ಲಿ ಇರುವವರಿಗೆ ದೃಷ್ಟಿಹೀನತೆ ಕಾಡುತ್ತದೆ. ಇದು ಹುಟ್ಟಿನಿಂದ ಬಂದಿದೆಯೋ ಅಥವಾ ಬುದ್ದಿ ಶೂನ್ಯವಾಗಿದೆಯೋ ಅಥವಾ ಬೇರೇನಾದರೂ ಸಂಚು ಇರಬಹುದೇ? ನೋಟ ಬೇರೆ ಮಾತು ಬೇರೆ ಎಂಬ ಮೆಳ್ಳೆಗಣ್ಣತನವಿದೆಯೋ ತಿಳಿಯದು ಕನ್ನಡತನವನ್ನು ನಿರ್ಲಕ್ಷಿಸುತ್ತಿದ್ದಾರೆ ಇದು ಸರಿಯಲ್ಲ. ನಾಡು ನುಡಿಯ ರಕ್ಷಣೆಗಾಗಿ ಅಧಿಕಾರ ಪಡೆದು ಅದನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಇದನ್ನು ನಾವು ಒಪ್ಪುವುದೂ ಇಲ್ಲ. ಕರ್ನಾಟಕ ಎಂಬುದು ಬರೀ ಒಂದು ಭೂಪ್ರದೇಶದ ಅಥವಾ ಮಣ್ಣಿನ ಹೆಸರಲ್ಲ. ಕನ್ನಡಿಗರ ಪಾಲಿಗೆ ಅದು ಮಂತ್ರ, ಶಕ್ತಿ, ದೇವಿ, ಬೆಂಕಿ, ಸಿಡಿಲು ಎಲ್ಲವೂ ಆಗಿದೆ. ಒಲಿದವರಿಗೆ ದೇವಿಯೂ, ಕೆಣಕಿದವರಿಗೆ ಕಾಳಿಯೂ ಆಗುತ್ತಾಳೆ. ಇದನ್ನು ಅರಿಯುವ ಕಣ್ಣು ನಮ್ಮದಾಗಬೇಕು. ಕನ್ನಡ ವಿರೋಧಿಗಳಿಗೆ ಆಸ್ಫೋಟಕವಾಗುವುದು. ಇದು ಸರಸ್ವತಿಯೇ ರಚಿಸಿದ ಅಖಂಡ ಕರ್ನಾಟಕ ಎಂದು ಕವಿ ಹಾಡಿದ್ದಾರೆ.
ಸಂದರ್ಭ:
1. ಅಲ್ತೊ ನಮ್ಮ ಕೂಗಾಟದ ರಾಜಕೀಯ ನಾಟಕ.
ಆಯ್ಕೆ : ಈ ವಾಕ್ಯವನ್ನು ಕವಿ “ಕುವೆಂಪು”ರವರು ಬರೆದಿರುವ ‘ಅಖಂಡ ಕರ್ನಾಟಕ’ ಎಂಬ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ : ಕವಿ ಇಲ್ಲಿ ಅಖಂಡ ಕರ್ನಾಟಕ ನಮ್ಮ ರಾಜಕೀಯ ನಾಟಕ ಅಲ್ಲ, ಅದು ಶಕ್ತಿಯ ಒಸರು ಎಂದು ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ : ಪ್ರಾದೇಶಿಕವಾಗಿ ಕನ್ನಡ ನಾಡೆಂದು ಪರಿಗಣಿತವಾದ ಕರ್ನಾಟಕವು ಯಾವುದೇ ಭಾವನಾತ್ಮಕವಾದ ಐಕ್ಯತೆಯನ್ನು ಸಾಧಿಸಲಿಲ್ಲ. ಅಖಂಡ ಕರ್ನಾಟಕದ ಕಲ್ಪನೆ ಕೇವಲ ರಾಜಕಾರಣಿಗಳ, ಸಮಯ ಸಾಧಕರ ಸ್ವಾರ್ಥಕ್ಕೊಳಗಾಗಿ ರಾಜಕೀಯ ನಾಟಕವಾಗಿ ಪರಿಣಮಿಸಿದೆ. ಭಾಷೆಯ ಹಿನ್ನೆಲೆಯಿಂದ ರಾಜ್ಯವಾಗಿ ಪರಿಗಣಿತವಾದ ನಾಡು, ಸತ್ಯ-ಧರ್ಮಗಳ ತಳಹದಿಯಿಂದ ಪರಿಪುಷ್ಪವಾಗಿ ಸಮೃದ್ಧಿಯುಳ್ಳದ್ದಾಗಿದೆ. ಈ ಅಖಂಡತೆಯ ಕಲ್ಪನೆಯು ಸ್ವಾಯತ್ತೆಯಿಂದೊಡಗೂಡಿದ ಸತ್ಯಯುತ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಆದರೆ ಕೇವಲ ದುಷ್ಟರಾಜಕೀಯಕ್ಕಾಗಿ ಅಖಂಡತೆಯ ಕಲ್ಪನೆ ದುರುಪಯೋಗಗೊಳ್ಳುತ್ತಿರುವ ಬಗ್ಗೆ ಕವಿ ಆಕ್ರೋಶ ಭರಿತರಾಗಿ ಈ ಮೇಲಿನಂತೆ ಹೇಳುತ್ತಾರೆ.
2.ಇಂದು ಬಂದು ನಾಳೆ ಸಂದು ಹೋಹ ಸಚಿವ ಮಂಡಲ,
ಆಯ್ಕೆ : ಈ ವಾಕ್ಯವನ್ನು ಕವಿ “ಕುವೆಂಪು”ರವರು ಬರೆದಿರುವ ‘ಅಖಂಡ ಕರ್ನಾಟಕ’ ಎಂಬ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ : ಅಖಂಡ ಕರ್ನಾಟಕ ಇಂದು ಬಂದು ನಾಳೆ ಹೋಗುವ ಸಚಿವ ಮಂಡಲವಲ್ಲ, ಅದು ಸಿರಿಗನ್ನಡ ಸರಸ್ವತಿಯ ವಜ್ರ ಕರ್ಣಮಂಡಲ ಎಂದು ಕವಿ ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ : ಅಖಂಡವಾದ ಕರ್ನಾಟಕವೆಂಬ ನಾಡಿನ ಕುರಿತಂತೆ ಕವಿಯ ಕನಸು ಇದಾಗಿದೆ. ಸರಕಾರವೊಂದು ಅಸ್ತಿತ್ವಕ್ಕೆ ಬಂದು ನಿರ್ಮಿಸುವ ಸಚಿವ ಸಂಪುಟವು ಸರಕಾರದ ಅಧಿಕಾರ ಕೊನೆಯಾದೊಡನೆ ವಿಸರ್ಜಿಸಲ್ಪಡುತ್ತದೆ. ಆದರೆ ಕರ್ನಾಟಕದ ಭವ್ಯ ಸಂಸ್ಕೃತಿಯೆಂಬುದು ಇಷ್ಟಕ್ಕೆ ಮುಗಿಯದೆ ಹಿಂದಿನಿಂದಲೇ ಇದ್ದು ಇನ್ನೂ ಉಳಿದುಕೊಳ್ಳುವಂತಹದ್ದು. ಕರ್ನಾಟಕದ ಸಂಸ್ಕೃತಿಯನ್ನು ಕಟ್ಟಿಕೊಟ್ಟು ಆಳುವ ಅರಸ-ಸಚಿವರು ಪಂಡಿತರೂ ವಿವೇಕಿಗಳೂ ಆದ ಕವಿವರೇಣ್ಯರು ಎಂದು ಕುವೆಂಪು ಹೇಳುತ್ತಾರೆ. ಸಂಸ್ಕೃತಿ ಮತ್ತುಪೂರ್ವಕವಿಗಳನ್ನು ಕುರಿತು ಕವಿಗಿರುವ ಗೌರವಾದರಗಳು ಇಲ್ಲಿ ವ್ಯಕ್ತಗೊಂಡಿದೆ.
3. ನೃಪತುಂಗನೆ ಚಕ್ರವರ್ತಿ! ಪಂಪನಲ್ಲಿ ಮುಖ್ಯಮಂತ್ರಿ!
ಆಯ್ಕೆ : ಈ ವಾಕ್ಯವನ್ನು ಕವಿ “ಕುವೆಂಪು “ರವರು ಬರೆದಿರುವ ‘ಅಖಂಡ ಕರ್ನಾಟಕ’ ಎಂಬ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ : ಕವಿ ಇಲ್ಲಿ ಸರಸ್ವತಿ ಮಾತೆ ರಚಿಸಿರುವ ಸಾರಸ್ವತ ಸಚಿವ ಮಂಡಲದ ಕುರಿತು ಕವಿ ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ : ಕನ್ನಡ ಸಾರಸ್ವತ ಲೋಕವು ಅತ್ಯಂತ ಶ್ರೀಮಂತವಾದುದು. ಕವಿರಾಜಮಾರ್ಗಕಾರನಿಗೆ ಆಶ್ರಯವನ್ನಿತ್ತ ಅಮೋಘವರ್ಷ ನೃಪತುಂಗ, ಕನ್ನಡದ ಆದಿ ಕವಿಯಾಗಿದ್ದು, ಸೇನಾಪತಿಯೂ ಆಗಿದ್ದ ಪಂಪ, ಇವರೆಲ್ಲ ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದವರು. ಸ್ಪಷ್ಟ ರೂಪುರೇಷೆಯನ್ನು ಕೊಟ್ಟವರು. ಈ ಹಿನ್ನೆಲೆಯಿಂದ ಕವಿ ಸಾರಸ್ವತ ಲೋಕದ ದಿಗ್ಗಜರುಗಳು ಈ ನಾಡಿನ ಸಂಸ್ಕೃತಿಯ ನಿರ್ಮಾಣಕರ್ತರು ಎಂದು ವಿವರಿಸುತ್ತ ಈ ಮೇಲಿನಂತೆ ಹೇಳುತ್ತಾರೆ.
4. ಪಕ್ಷ ಜಾತಿ ಕಲಹಕಲ್ತೊ
ಆಯ್ಕೆ : ಈ ವಾಕ್ಯವನ್ನು ಕವಿ “ಕುವೆಂಪು “ರವರು ಬರೆದಿರುವ ‘ಅಖಂಡ ಕರ್ನಾಟಕ’ ಎಂಬ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ : ಅಖಂಡ ಕರ್ನಾಟಕ ಕೇವಲ ರಾಜಕೀಯ ಎನ್ನುವ ನಾಟಕ ರಂಗಕ್ಕೆ ಸೀಮಿತವಾಗಿಲ್ಲ.
ಪಕ್ಷಜಾತಿ ಕಲಹಕ್ಕೆ ಸೀಮಿತವಾಗಿಲ್ಲ ಎಂದು ಕವಿ ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ : ಭಾಷೆ, ನಾಡು, ಸಂಸ್ಕೃತಿಯೆಂಬುದು ಉದಾತ್ತವಾದ ಧೈಯವನ್ನು ಅಳವಡಿಸಿ ಉನ್ನತವಾದ ಜೀವನವನ್ನು ಪರಿಪಾಲಿಸುವ ಉದ್ದೇಶಕ್ಕಾಗಿ ಇದೆಯೇ ಹೊರತು ಕಲಹ, ಕೋಲಾಹಲಗಳಿಗೆ ಎಡೆಗೊಟ್ಟು ಕಿತ್ತಾಡಿಕೊಳ್ಳಲೆಂದು ಅಲ್ಲ ಎಂದು ಎಚ್ಚರಿಸುತ್ತ ಕವಿ ಕರ್ನಾಟಕದಸಮಗ್ರತೆಯ ಮಹತ್ವವನ್ನು ತಿಳಿಸಿದ್ದಾರೆ. ಆದರ್ಶಗಳು ಆಚರಣೆಯಿಂದ ದೂರವಾಗಿರುವ ಬಗ್ಗೆ ಕವಿಯ ಅಸಮಾಧಾನವು ಇಲ್ಲಿ ಪ್ರಕಟಗೊಂಡಿದೆ.
5. ಮೆರೆಯಲಾತ್ಮ ಸಂಸ್ಕೃತಿ
ಆಯ್ಕೆ : ಈ ವಾಕ್ಯವನ್ನು ಕವಿ “ಕುವೆಂಪು “ರವರು ಬರೆದಿರುವ ‘ಅಖಂಡ ಕರ್ನಾಟಕ’ ಎಂಬ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ : ಕವಿ ಅಖಂಡ ಕರ್ನಾಟಕವು ‘ಆತ್ಮ ಸಂಸ್ಕೃತಿಯ ಪ್ರತೀಕ’ವೆಂದು ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ : ಆತ್ಮ ಸಂಸ್ಕೃತಿ ಎಂದರೆ ತನ್ನದಾದ (ಸ್ವಂತ, ದೇಶೀಯ) ಸಂಸ್ಕೃತಿ, ಅಖಂಡ ಕರ್ನಾಟಕವೆಂಬ ಕಲ್ಪನೆಯು, ರಾಜಕಾರಣಿಗಳ ಬೂಟಾಟಿಕೆಗಾಗಿ ರೂಪುಗೊಂಡುದಲ್ಲ, ಸರಸ್ವತಿಯು ತನ್ನ ಸಿರಿಯನ್ನು ಪ್ರಕಟಿಸಲೆಂದು ನಿರ್ಮಿಸಿದ ರೂಪಕ, ಆಧ್ಯಾತ್ಮಿಕತೆ, ಜೀವ ಜೀವ ಕಾರುಣ್ಯ, ಬದುಕಿಗೆ ಅವಶ್ಯಕವಾದ ಜ್ಞಾನದ ಬೆಳಕು-ಇವುಗಳಿಂದ ಕೂಡಿದ್ದುದಾಗಿದೆ-ಎಂದು ಕವಿ ಹೇಳುತ್ತಾರೆ. ಕನ್ನಡ ನಾಡು- ನುಡಿಯ ಹಿರಿಮೆ ಏನೆಂಬುದರ ಬಗ್ಗೆ ಕವಿ ಇಲ್ಲಿ ಹೇಳುತ್ತಾರೆ.
6. ಮಂತ್ರ ಕಣಾ! ಶಕ್ತಿ ಕಣಾ !
ಆಯ್ಕೆ : ಈ ವಾಕ್ಯವನ್ನು ಕವಿ “ಕುವೆಂಪು “ರವರು ಬರೆದಿರುವ ‘ಅಖಂಡ ಕರ್ನಾಟಕ’ ಎಂಬ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ: ಕರ್ನಾಟಕದ ಮಹತ್ವವನ್ನು ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ : ಕರ್ನಾಟಕ ಎಂದರೇನು? ಎಂಬ ಪ್ರಶ್ನೆಗೆ ಅನೇಕರು ಸ್ಪಷ್ಟ ಉತ್ತರವನ್ನು ಕಂಡುಕೊಂಡಿರಲಾರರು. ಅದಕ್ಕಾಗಿ ಕವಿ ಕರ್ನಾಟಕವೆಂದರೆ ಬರಿಯ ಮಣ್ಣಲ್ಲ, ಬರಿಯ ಜನರಲ್ಲ, ಬರಿಯ ಭಾಷೆಯಲ್ಲ ಇವೆಲ್ಲವನ್ನೂ ಮೀರಿದ ಮಂತ್ರ, ಮನುಷ್ಯಾತೀತವಾದ ಶಕ್ತಿ-ಎಂದು ಕವಿ ಅಖಂಡ ಕರ್ನಾಟಕದ ಹಿರಿಮೆಯನ್ನಿಲ್ಲಿ ವಿಷದಪಡಿಸಿದ್ದಾರೆ. ‘ಅಖಂಡ ಕರ್ನಾಟಕ’ವು ಸಾಂಸ್ಕೃತಿಕ, ಆಧ್ಯಾತ್ಮಿಕ ಹಿನ್ನಲೆಯುಳ್ಳ ಒಂದು ಶಕ್ತಿಯೆಂಬುದು ಕವಿಯ ಸಮರ್ಥನೆಯಾಗಿದೆ.
ಐದಾರು ವಾಕ್ಯದಲ್ಲಿ ಉತ್ತರಿಸಿ :
1.ಕುವೆಂಪು ಅವರು ‘ಕೂಗಾಟದ ರಾಜಕೀಯ ನಾಟಕ’ ಎಂದು ಹೇಳಿರುವ ಹಿನ್ನೆಲೆ ಏನು?
ಕವಿ ಕುವೆಂಪುರವರು ಅಖಂಡ ಕರ್ನಾಟಕ ಕವಿತೆಯಲ್ಲಿ ಕರ್ನಾಟಕವನ್ನು ಇಡಿಯಾಗಿ ನೋಡುವ ಬಯಕೆಯನ್ನು ಹೊಂದಿದ್ದಾರೆ. ಆದರೆ ಆಳುವವರ ಇಬ್ಬಂದಿತನದಿಂದಾಗಿ ಕರ್ನಾಟಕದ ಏಕತೆಗೆ ಧಕ್ಕೆ ಒದಗುತ್ತಿರುವ ಬಗ್ಗೆ ಆತಂಕವನ್ನು ವ್ಯಕ್ತಪಡಿಸುತ್ತಾರೆ.
ಕವಿತೆಯ ಆರಂಭದಲ್ಲಿಯೇ ‘ಆಲ್ಲೋ ನಮ್ಮ ಕೂಗಾಟದ ರಾಜಕೀಯ ನಾಟಕ ಎನ್ನುವ ಸಾಲುಗಳು ನಮ್ಮಲ್ಲಿ ಭಾವನಾತ್ಮಕ ಐಕ್ಯತೆ ಇಲ್ಲ ಎನ್ನುವುದನ್ನು ತಿಳಿಸುತ್ತವೆ. ಇಂದಿನ ರಾಜಕೀಯ ಬರೀ ಕೂಗಾಟದ ರಾಜಕೀಯ ನಾಟಕ ಎಂದಿದ್ದಾರೆ. ಇಂದಿನ ರಾಜಕಾರಣಿಗಳು ಇಂದು ಬಂದು ನಾಳೆ ಹೋಗುವವರಾಗಿದ್ದಾರೆ. ಅಭಿವೃದ್ಧಿಯ ಮಂತ್ರವನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದು ನಂತರ ಸ್ವಾರ್ಥದಲ್ಲಿ ತೊಡಗಿಕೊಂಡು ಇಡೀ ಪರಿಸರವನ್ನೇ ಕೊಳೆತು ನಾರುವಂತೆ ಮಾಡುತ್ತಾರೆ. ಎಲ್ಲ ಜನರೂ ಅಧಿಕಾರಿಗಳಾಗಲು ಸಾಧ್ಯವಿಲ್ಲ. ಎಲ್ಲರ ಪ್ರತಿನಿಧಿಯಾಗಿ ಆಯ್ಕೆಗೊಂಡ ಜನಪ್ರತಿನಿಧಿ (ರಾಜಕಾರಣಿ) ತನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲನಾಗಿದ್ದಾನೆ. ಯಾರೇ ಅಧಿಕಾರಕ್ಕೆ ಬಂದರೂ ದೇಶದ ಸಂಪತ್ತನ್ನು ಲೂಟಿ ಮಾಡದೇ ಬಿಡುವುದಿಲ್ಲ. ತನ್ನಿಂದ ಆದಷ್ಟು ಸಂಪತ್ತನ್ನು ದೋಚಿಕೊಳ್ಳುತ್ತಾರೆ. ಕವಿ ಈ ರೀತಿಯ ರಾಜಕೀಯ ನಾಟಕವನ್ನು ವಿಡಂಬಿಸುತ್ತಾರೆ. ಅಲ್ಲದೆ ಸರಸ್ವತಿಯು ರಚಿಸಿದ ಸಚಿವ ಮಂಡಲ ಶ್ರೇಷ್ಠ ಎನ್ನುತ್ತಾರೆ.’
2. ಸರಸ್ವತಿಯ ಸಚಿವ ಮಂಡಲವನ್ನು ಕುರಿತು ಬರೆಯಿರಿ.
ಕುವೆಂಪುರವರು ಅಖಂಡ ಕರ್ನಾಟಕವೆನ್ನುವುದು ಬೂಟಾಟದ ರಾಜಕೀಯ ನಾಟಕವಲ್ಲ ಎನ್ನುತ್ತಾರೆ. ಕರ್ನಾಟಕವು ತನ್ನದೇ ಆದ ಭವ್ಯ ಸಂಸ್ಕೃತಿಯನ್ನು ಹೊಂದಿದೆ. ಇಲ್ಲಿ ಇಂದು ಬಂದು ನಾಳೆ ಹೋಗುವ ಸಚಿವ ಮಂಡಲವಿಲ್ಲ. ಇಲ್ಲಿ ಸರಸ್ವತಿಯೇ ಒಂದು ಸಚಿವ ಮಂಡಲವನ್ನು ರಚಿಸಿದ್ದಾಳೆ. ಅದು ಬಹಳ ವಿಶಿಷ್ಟವಾಗಿರುವಂತದ್ದು.
ಅಲ್ಲಿ ಅಮೋಘವರ್ಷ ನೃಪತುಂಗನೇ ಚಕ್ರವರ್ತಿಯಾಗಿದ್ದಾನೆ. ಆದಿ ಕವಿ ಪಂಪ ಈ ಸಚಿವ ಮಂಡಲದ ಮುಖ್ಯಮಂತ್ರಿಯಾಗಿದ್ದಾನೆ. ಇನ್ನು ಕವಿ ರತ್ನತ್ರಯರಲ್ಲಿ ಒಬ್ಬನಾದ ರನ್ನ, ಜನ್ನ, ನಾಗವರ್ಮ, ಪಟ್ಟದಿ ಬ್ರಹ್ಮ ರಾಘವಾಂಕ, ರಗಳೆ ಕವಿ ಹರಿಹರ, ಬಸವೇಶ್ವರ, ಗದುಗಿನ ನಾರಣಪ್ಪ (ಕುಮಾರವ್ಯಾಸ), ಸರ್ವಜ್ಞ, ಷಡಕ್ಷರ ಸರಸ್ವತಿಯು ರಚಿಸಿದ ಸಚಿವ ಮಂಡಲದ ಸದಸ್ಯರುಗಳಾಗಿದ್ದಾರೆ. ಕವಿಗಳಿಂದ ರಚಿತವಾದ ಈ ಸಚಿವ ಮಂಡಲ ವಿನಾಶವಿಲ್ಲದ್ದು. ಇಲ್ಲಿ ಇವರು ಯಾರ ಹಂಗಿಲ್ಲದೆ ಕಾಂತಿಯುತವಾಗಿ ಹೊಳೆಯುತ್ತಿದ್ದಾರೆ ಎನ್ನುತಾ ಕವಿ ಸರಸ್ವತಿಯ ಸಚಿವ ಮಂಡಲವನ್ನು ವಿವರಿಸುತ್ತಾರೆ.
3. ಅಖಂಡ ಕರ್ನಾಟಕವು ಬರೀ ರಾಜಕೀಯ ನಾಟಕವಲ್ಲ, ಏಕೆ ?
ರಾಜಕೀಯ ಬೂಟಾಟಿಕೆಯ ಬಗ್ಗೆ ವಿವರಿಸುತ್ತಾ ಕವಿ ಅಖಂಡ ಕರ್ನಾಟಕವು ರಾಜಕೀಯ ನಾಟಕವಲ್ಲ. ಎಂದಿದ್ದಾರೆ. ಅದು ಸಾಕ್ಷಾತ್ ಸರಸ್ವತಿಯೇ ರಚಿಸಿದ ರಾಜಕೀಯ ರೂಪಕವಾಗಿದೆ. ಕರ್ನಾಟಕವು ತನ್ನದೇ ಆದ ದೇಶೀಯ ಸಂಸ್ಕೃತಿಯನ್ನು ಹೊಂದಿದೆ. ಕವಿ ಇದನ್ನೇ ಮರೆಯಲಾತ್ಮ ಸಂಸ್ಕೃತಿ ಎಂದು ಕರೆದಿದ್ದಾರೆ. ಇದರಲ್ಲಿ ಸದಾ ಜೀವ ದೀಧಿತಿ ಬೆಳಗಬೇಕು. ಪರಮಾತ್ಮನ ಚರಣ ದೀಪ್ತಿ ಶರಣ ಹೃದಯಗಳಲ್ಲಿ ಹೊತ್ತಿ ಉಸಿರುಸಿರಿನ ಹಣತೆಯು ತಣ್ಣನೆ ಉರಿಯುತ್ತಿದೆ. ಇದು ಭಗವಂತನ ಕಣ್ಣಿಗೆ ಕಾಣುವ ರಸಸ್ಪೂರ್ತಿಯ ರೂಪಕವಾಗಿದೆ.
ಕರ್ನಾಟಕವೆಂಬ ನಾಡಿರುವುದು ಬರೀ ಹೊಟ್ಟೆ ಬಟ್ಟೆಗಲ್ಲ, ಪಕ್ಷ ಜಾತಿ ಕಲಹಕಲ್ಲ, ಹಮ್ಮು ಬಿಮ್ಮುಗಳಿಗಲ್ಲ, ಬಣ್ಣದ ಬಾಳಿಗಲ್ಲ, ಅನ್ನದ ಹಂಗಿಗಾಗಿ ಅಲ್ಲ. ದರ್ಪಕ್ಕಾಗಿ, ಸ್ವಾರ್ಥಕ್ಕಾಗಿ, ದ್ವೇಷಕ್ಕಾಗಿ ಇರುವ ನಾಡಲ್ಲ ಇದು ಯಾರೂ ಒಡೆಯಲಾಗದ ನಾಡು ಎಂದು ಕವಿ ವಿವರಿಸುತ್ತಾರೆ.
ಕರ್ನಾಟಕವೆನ್ನುವುದು ಅದು ಜಪಿಸುವ ಮಂತ್ರದ ಹಾಗೆ, ಸ್ಪೂರ್ತಿಯ ಶಕ್ತಿ, ತಾಯಿಯ ರೂಪ, ದೇವಿಯ ಅವತಾರ, ಅವಳು ಬೆಂಕಿಯಷ್ಟು ಪ್ರಖರ, ವಿರೋಧಿಗಳಿಗೆ ಸಿಡಿಲಿನ ರೂಪದಲ್ಲಿ ಎರಗುತ್ತಾಳೆ. ಕಾಯುವ, ಕೊಲ್ಲುವ, ಒಲವಿನ, ಬಲವನ್ನು ಪಡೆದ ಚಲದ ಚಂಡಿಯಾಗಿದ್ದಾಳೆ. ಎಂದು ಕರ್ನಾಟಕದ ಹಿರಿಮೆಯನ್ನು ಕವಿ ಸಾರುತ್ತಾರೆ.
4. ರಾಜಕೀಯ ಶಕ್ತಿಯೇ ಮೇಲೈಸುತ್ತಿರುವ ಇಂದಿನ ಸಂದರ್ಭದಲ್ಲಿ ನಾಡನ್ನು ಒಂದು ಸಾಂಸ್ಕೃತಿಕ ಅಸ್ತಿತ್ವವಾಗಿ ಕಲ್ಪಿಸಲು ಈ ಕವನ ಹೇಗೆ ಪೂರಕವಾಗಿದೆ?
ಕುವೆಂಪುರವರ ಅಭಿಪ್ರಾಯದ ಪ್ರಕಾರ ರಾಷ್ಟ್ರದ ಬದುಕಿನಲ್ಲಿ ರಾಜಕೀಯ ಅಧಿಕಾರವೇ ಅಂತಿಮವಲ್ಲ, ಪ್ರಭುತ್ವವು ನಾಡಿನ ಸಾಂಸ್ಕೃತಿಕ ಅಸ್ತಿತ್ವವನ್ನು ನಿರ್ಲಕ್ಷಿಸುತ್ತಿದೆ. ಸುತ್ತಿದೆ. ರಾಜಕೀಯ ಪ್ರಭುತ್ವವು ನೈತಿಕ ಅಧಃಪತನದತ್ತ ಸಾಗಿದಾಗ ಸಾಂಸ್ಕೃತಿಕ ಶಕ್ತಿಗಳೇ ನಾಡಿನ ಅಂತಃಪ್ರಜ್ಞೆಯ ದ್ಯೋತಕವಾಗಿ ಪ್ರತಿರೋಧಿಸುತ್ತಾ ಬಂದಿದೆ. ನಾಡಿನ ಆತ್ಮಗೌರವವನ್ನು ಎತ್ತಿ ಹಿಡಿದಿವೆ.
ಇಂದು ರಾಜಕೀಯ ಶಕ್ತಿಗಳು ದಮನಕಾರಿ ನೀತಿಯನ್ನು ಅನುಸರಿಸುತ್ತಿವೆ. ಆಳುವ ನೆಪದಲ್ಲಿ ನಾಡಿನ ಸಂಪತ್ತನ್ನು ಲೂಟಿ ಮಾಡಲಾಗುತ್ತಿವೆ. ಮಾತ್ರವಲ್ಲ ಸಂಸ್ಕೃತಿಯ ಅಧಃಪತನದ ಸೂಚನೆಗಳು ಕಾಣುತ್ತಿವೆ. ಕವಿ ಕುವೆಂಪುರವರು ಆಳುವವರಿಗೆ ನಮ್ಮ ಸಾಹಿತ್ಯ, ಸಂಸ್ಕೃತಿ, ಪರಂಪರೆಗಳ ಅರಿವು ಅಗತ್ಯ ಎಂದಿದ್ದಾರೆ. ಇಲ್ಲದೇ ಹೋದರೆ ಅಖಂಡ ನಾಡು ಬರಿ ಕನಸಾಗಿಯೇ ಉಳಿಯುತ್ತದೆ. ಮೌಲ್ಯಗಳು ಇಂದು ಕಣ್ಮರೆಯಾಗುತ್ತಿವೆ. ಪರಿಸರ, ಸಹಕಾರ, ಅಭಿಮಾನ, ಪ್ರೀತಿ, ಬಾಂಧವ್ಯ ಕಾಣದಾಗಿದೆ. ಬದಲಾಗಿ ಅಧಿಕಾರದಾಹ, ಜಾತಿಲೆಕ್ಕಾಚಾರ, ಧರ್ಮದ ಬಗ್ಗೆ ಕುರುಡು ವ್ಯಾಮೋಹ ಉಂಟಾಗಿದೆ. ಕವಿ ಇಂತಹ ಮನಸ್ಥಿತಿಯನ್ನು ಉಲ್ಲೇಖಿಸುತ್ತಾ ಸಂಸ್ಕೃತಿಯ ಆತ್ಮವನ್ನು ಕಾಣುವ ಮನೋಭಾವ ಆಳುವ ವರ್ಗಕ್ಕೆ ಇರಬೇಕೆನ್ನುತ್ತಾರೆ. ಕವಿತೆಯಲ್ಲಿ ಬರುವ ಸರಸ್ವತಿಯ ಸಚಿವ ಮಂಡಲ, ಆತ್ಮ ಸಂಸ್ಕೃತಿಯು ಈ ಎಲ್ಲ ಪದಗಳು ನಾಡನ್ನು ಇಡಿಯಾಗಿ ರೂಪಿಸುವ ಪ್ರಯತ್ನ ಮಾಡುವುದನ್ನು ಇಲ್ಲಿ ಕಾಣಬಹುದಾಗಿದೆ.
5.ಕರ್ನಾಟಕ ಎಂಬುದು ಬರೀ ಮಣ್ಣಿಗೆ ಹೆಸರಲ್ಲ ಎಂಬುದನ್ನು ಕವಿ ಹೇಗೆ ಹೇಳಿದ್ದಾರೆ?
ಕವಿ ಕುವೆಂಪುರವರು ಕರ್ನಾಟಕವನ್ನು ಅಖಂಡವಾಗಿ ಕಾಣುವ ಬಯಕೆಯನ್ನು ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಕವಿತೆಯ ಪ್ರತಿಯೊಂದು ಸಾಲುಗಳೂ ಕೂಡ ನಿದ್ದೆಯ ಮಂಪರಿನಲ್ಲಿರುವವರನ್ನು ಎಚ್ಚರಿಸುವಂತಿದೆ. ಕವಿತೆಯ ಆರಂಭದಿಂದಲೂ ಕರ್ನಾಟಕದ ಅಖಂಡತೆಯ ಬಗ್ಗೆ ವಿವರಿಸುವ ಕವಿ ಕವಿತೆಯ ಕೊನೆವರೆಗೂ ಕೂಡ ಕರ್ನಾಟಕದ ಕುರಿತಾದ ಕಾಳಜಿಯನ್ನೇ ವ್ಯಕ್ತ ಪಡಿಸುತ್ತಾ ಹೋಗುತ್ತಾರೆ.
ಕರ್ನಾಟಕ ಎಂದರೇನು? ಹೆಸರೆ ಬರಿಯ ಮಣ್ಣಿಗೆ ಎಂದು ಕವಿಯೇ ಪ್ರಶ್ನಿಸುತ್ತಾ ಕರ್ನಾಟಕದ ಬಗೆಗಿನ ವಿಶೇಷವಾದ ವಿವರಣೆಯನ್ನು ಕೊಡಲು ಮುಂದಾಗುತ್ತಾರೆ. ಕರುನಾಡು ಎಂಬ ಹೆಸರು ಬರೀ ಮಣ್ಣಿನ ಕಾರಣದಿಂದ ಬಂದಿಲ್ಲ. ಅದು ಜಪಿಸುವ ಮಂತ್ರದ ಹಾಗೆ. ಅದು ಸ್ಫೂರ್ತಿಯ ಶಕ್ತಿ, ತಾಯಿಯ ರೂಪವನ್ನು ಕರ್ನಾಟಕ ಮಾತೆ ಹೊಂದಿದ್ದಾಳೆ. ಆಕೆ ದೇವಿಯ ಅವತಾರ, ಆಕೆ ಬೆಂಕಿಯಷ್ಟು ಪ್ರಖರಳು, ವಿರೋಧಿಗಳಿಗೆ ಸಿಡಿಲಿನ ರೂಪದಲ್ಲಿ ಎರಗುತ್ತಾಳೆ. ಶಿಷ್ಟರನ್ನು (ಒಳ್ಳೆಯವರನ್ನು) ಕಾಯುವ, ದುಷ್ಟರನ್ನು ಕೊಲ್ಲುವ, ಒಲವಿನ, ಬಲವನ್ನು ಪಡೆದ ಚಲದ ಚಂಡಿಯಾಗಿದ್ದಾಳೆ. ವಿರೋಧಿಗಳಿಗೆ ಆಸ್ಫೋಟಕ, ಕವಿಯ ಕಣ್ಣಿಗೆ ಅಖಂಡ ದೇವಿ ಸ್ವರೂಪದವಳಾಗಿದ್ದಾಳೆ ಹೀಗೆ ಕವಿ ಕರ್ನಾಟಕದ ಮಹಿಮೆಯನ್ನು ಸಾರುತ್ತಾರೆ.
ಒಂದು ವಾಕ್ಯದಲ್ಲಿ ಉತ್ತರಿಸಿ:
1. ಅಖಂಡ ಕರ್ನಾಟಕವನ್ನು ಹರಸುತ್ತಿರುವವನು ಯಾರು? ಅಖಂಡ ಕರ್ನಾಟಕವನ್ನು ಹರಸುತ್ತಿರುವವನು ದೇವಗಾಂಧಿ.
2. ಇಂದು ಬಂದು ನಾಳೆ ಹೋಗುವುದು ಯಾವುದು? ಸಚಿವ ಮಂಡಲ ಇಂದು ಬಂದು ನಾಳೆ ಹೋಗುವುದು.
3. ಸಿರಿಗನ್ನಡವನ್ನು ಯಾವುದಕ್ಕೆ ಹೋಲಿಸಲಾಗಿದೆ? ಸಿರಿಗನ್ನಡವನ್ನು ಸರಸ್ವತಿಯ ವಜ್ರ ಕರ್ಣಕುಂಡಲಕ್ಕೆ ಹೋಲಿಸಲಾಗಿದೆ.
4. ಅಖಂಡ ಕರ್ನಾಟಕದ ಚಕ್ರವರ್ತಿ ಯಾರು? ಅಖಂಡ ಕರ್ನಾಟಕಕ್ಕೆ ನೃಪತುಂಗನೆ ಚಕ್ರವರ್ತಿ.
5. ಅಖಂಡ ಕರ್ನಾಟಕದ ಮುಖ್ಯಮಂತ್ರಿ ಯಾರು? ಅಖಂಡ ಕರ್ನಾಟಕಕ್ಕೆ ಪಂಪನೇ ಮುಖ್ಯಮಂತ್ರಿ
6. ಸರಸ್ವತಿಯು ಯಾವ ಸಂಸ್ಕೃತಿಯನ್ನು ಮೆರೆಯಲು ಕರ್ನಾಟಕವನ್ನು ರಚಿಸಿದ್ದಾಳೆ? ಕರ್ನಾಟಕದ ಆತ್ಮ ಸಂಸ್ಕೃತಿಯನ್ನು ಮೆರೆಯಲು ಸರಸ್ವತಿಯು ಕರ್ನಾಟಕವನ್ನು ರಚಿಸಿದಳು.
7. ಕರ್ನಾಟಕವು ಯಾರ ಹೃದಯಗಳಲ್ಲಿ ಹೊತ್ತಿರುವ ದೀಪವಾಗಿದೆ? ಕರ್ನಾಟಕವು ಶರಣರ ಹೃದಯಗಳಲ್ಲಿ ಹೊತ್ತಿರುವ ದೀಪವಾಗಿದೆ.
8. ಚಲದ ಚಂಡಿ ಯಾರು? ಕನ್ನಡದೇವಿ ಚಲದ ಚಂಡಿಯಗಿದ್ದಾಳೆ.
ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ :
1. ಅಖಂಡ ಕರ್ನಾಟಕ ಬೂಟಾಟದ ರಾಜಕೀಯ ನಾಟಕವಲ್ಲವೇಕೆ?
ಅಖಂಡ ಕರ್ನಾಟಕ ರಾಜಕೀಯ ನಾಟಕವಲ್ಲ. ಇಲ್ಲಿ ಕೋಟಿ ಕೋಟಿ ಹಿರಿಯ ಕನಸು ನನಸಿನ ವಿಂಧ್ಯ ಕಲ್ಪನೆಯಿದೆ. ಇದು ಸರಸ್ವತಿಯೇ ರಚಿಸಿರುವ ಅಖಂಡ ಕರ್ನಾಟಕವಾಗಿದೆ. ಇಲ್ಲಿ ಇಂದು ಬಂದು ನಾಳೆ ಹೋಗುವ ಸಚಿವ ಮಂಡಲವಿಲ್ಲ.
2. ಸರಸ್ವತಿಯ ಸಚಿವ ಮಂಡಲದ ಸದಸ್ಯರು ಯಾರು?
ನೃಪತುಂಗನೇ ಚಕ್ರವರ್ತಿಯಾಗಿ, ಕವಿ ಪಂಪ ಮುಖ್ಯಮಂತ್ರಿಯಾಗಿದ್ದಾನೆ. ರನ್ನ, ಜನ್ನ, ನಾಗವರ್ಮ, ರಾಘವಾಂಕ, ಹರಿಹರ, ಬಸವೇಶ್ವರ, ನಾರಣಪ್ಪ (ಕುಮಾರವ್ಯಾಸ), ಸರ್ವಜ್ಞ, ಷಡಕ್ಷರ ದೇವ, ಮೊದಲಾದವರನ್ನೊಳಗೊಂಡ ನಿತ್ಯ ಸಚಿವಮಂಡಲವನ್ನು ಸರಸ್ವತಿ ರಚಿಸಿದ್ದಾಳೆ.
3. ಪರಮಾತ್ಮನ ಚರಣದೀಪ್ತಿ ಎಲ್ಲಿ ಮತ್ತು ಹೇಗೆ ಉರಿಯಬೇಕೆಂದು ಕವಿ ಹೇಳುತ್ತಾರೆ?
ಕನ್ನಡದ ಆತ್ಮ ಸಂಸ್ಕೃತಿಯು, ಪರಮಾತ್ಮನ ಚರಣದ ಕಾಂತಿಯು, ಶರಣರ ಹೃದಯದಲ್ಲಿ ಬೆಳಗಿ, ದೀಪವಾಗಿ ಉರಿಯಬೇಕೆಂದು ಕವಿ ಹೇಳುತ್ತಾರೆ.
4.ಮೆಳ್ಳೆಗಣ್ಣನಿಗೆ ಕವಿ ಕೇಳುವ ಪ್ರಶ್ನೆಗಳು ಯಾವುವು?
ಉ: ನಿನಗೆ ಹುಟ್ಟುಕುರುಡೋ? ನಿನ್ನ ಬುದ್ದಿಗೆ ಬರವೆ? ಅಥವಾ ಬೇರೆಯದೇ ಆದ ಹಂಚಿಕೆ ಇದೆಯೇ? ಏಕೆ ಈ ಮೆಳ್ಳಗಣ್ಣು? ಕರ್ನಾಟಕ ಎಂಬುದು ಕೇವಲ ಈ ಮಣ್ಣಿಗೆ ಇರುವ ಹೆಸರು ಮಾತ್ರವೇ? ನಿನಗೆ ಕಣ್ಣು ಕಾಣುವುದಿಲ್ಲವೇ? ಎಂದೆಲ್ಲಾ ಪ್ರಶ್ನಿಸಿದ್ದಾರೆ.
________