International yoga day-June 21: ಯೋಗ ಯುಕ್ತ, ರೋಗ ಮುಕ್ತ
International yoga day-June 21: ಯೋಗ ಯುಕ್ತ, ರೋಗ ಮುಕ್ತ. ಇಂದು ಯೋಗ ದಿನಾಚರಣೆಯನ್ನು ವಿಶ್ವದ ತುಂಬೆಲ್ಲ ಆಚರಣೆಯನ್ನು ಮಾಡುತ್ತೇವೆ.
ಜಾಸನ್ ಕ್ರಾಂಡೆಲ್ ಅವರ ಪ್ರಕಾರ, ‘ಯೋಗವು ಮನುಷ್ಯನ ಜೀವನದ ಅಭ್ಯಾಸಕ್ರಮ. ‘ಅದು ವ್ಯಕ್ತಿಯ ದೇಹ, ಉಸಿರಾಟ, ಉಸಿರಾ ಮನಸ್ಸುಗಳನ್ನು ಕೇಂದ್ರೀಕರಿಸುವ ಸಾಧನ, ಯೋಗವು ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಧಾರಿಸಲು ಸಹಕಾರಿ. ಅವನಲ್ಲಿರುವ ಅರಿಷಡ್ವರ್ಗಗಳನ್ನು ನಿಗ್ರಹಿಸುವುದರೊಂದಿಗೆ ಅಂತರ್ಮುಖ ಮತ್ತು ತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ’ ಎಂದು ಹೇಳಿದ್ದಾರೆ.
ಯೋಗ ಎಂಬ ಪದವು ಮೂಲತಃ ಸಂಸ್ಕೃತ ಭಾಷೆಯ ‘ಯುಜ್‘ ಎಂಬ ಪದದಿಂದ ಬಂದಿದೆ. ಇದರರ್ಥ ಒಂದುಗೂಡಿಸುವುದು ಅಥವಾ ಸೇರಿಸುವುದು. ಇದು ದೇಹ, ಮನಸ್ಸು ಮತ್ತು ಆತ್ಮಗಳನ್ನು ಒಂದುಗೂಡಿಸುವ ಒಂದು ಮಾರ್ಗವಾಗಿದೆ. ಅದರಲ್ಲೂ ವಿಶೇಷವಾಗಿ ಯೋಗವು ಒತ್ತಡ, ಸಂಘರ್ಷ, ಆತಂಕ, ದುಗುಡ, ಖಿನ್ನತೆ, ನಿರ್ಲಿಪ್ತತೆ ಮತ್ತು ಮಾನಸಿಕ ಅಶಾಂತಿಯನ್ನು ಹೋಗಲಾಡಿಸಿ ಏಕಾಗ್ರತೆಯನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ.
ಯೋಗಗಳಲ್ಲಿ ಮುಖ್ಯವಾಗಿ ಹಠಯೋಗ, ರಾಜಯೋಗ, ಕರ್ಮಯೋಗ, ಭಕ್ತಿಯೋಗ ಮತ್ತು ಜ್ಞಾನಯೋಗ ಎಂಬ ಐದು ಪ್ರಕಾರಗಳಿವೆ. ದೈನಂದಿನವಾಗಿ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕರ ಜೀವನಶೈಲಿ ಬೆಳೆಸಲು ಇದೊಂದು ಶಕ್ತಿಯುತವಾದ ಸಾಧನ.
ಒಟ್ಟಾರೆ ದೈಹಿಕ ಕಸರತ್ತು, ವ್ಯಾಯಾಮ, ಧ್ಯಾನ, ಯೋಗ, ಇವೆಲ್ಲವೂ ವ್ಯಕ್ತಿಯ ಸುಸ್ಥಿರ ಆರೋಗ್ಯ ಮತ್ತು ಯೋಗಕ್ಷೇಮದೊಂದಿಗೆ ಬದುಕಲು ಸಹಾಯಕವಾಗಿವೆ. ನಮ್ಮ ಋಷಿ ಮುನಿಗಳ ಪ್ರಕಾರ, ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನದ ಶಿಕ್ಷಣವೇ ಯೋಗ, ಯೋಗವು ನಮ್ಮ ದೇಶದಲ್ಲಿ ಸುಮಾರು 6 ರಿಂದ 7 ಸಾವಿರ ವರ್ಷಗಳ ಹಿಂದೆಯೇ ಇರುವ ಜಾಗತಿಕ ವಿದ್ಯೆ. ಯೋಗ ಒಂದು ವ್ಯಾಯಾಮ ಮಾತ್ರವಲ್ಲದೇ ನಮ್ಮೊಂದಿಗೆ ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ತಿಳಿಸುತ್ತದೆ.
ಇದು ವ್ಯಕ್ತಿಯ ಮನಸ್ಸು, ದೇಹದಲ್ಲಿ ಸಮತೋಲನವನ್ನು ಕಾಪಾಡುತ್ತದೆ ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವನ್ನಾಗಿಸುತ್ತದೆ. ಯೋಗದಿಂದ ಒತ್ತಡ, ಆತಂಕ ಮತ್ತು ಸಂಘರ್ಷಯುಕ್ತವಾದ ಜೀವನದಿಂದ ಮುಕ್ತಿ ಹೊಂದಲು ಸಾಧ್ಯ. ನಮ್ಮ ಋಷಿ-ಮುನಿಗಳು ನೀಡಿದ ಈ ಯೋಗದ ಕೊಡುಗೆ ಇಂದು ಇಡೀ ಜಗತ್ತಿಗೆ ಆರೋಗ್ಯ-ಸ್ವಾಸ್ಥ್ಯ ಕಾಪಾಡುವ ಸಾಧನವಾಗಿದೆ.
ಭಾರತವು ಭವ್ಯ ಪರಂಪರೆ-ಸಂಸ್ಕೃತಿಯ ತವರೂರು. ಸಾಧು-ಸಂತ, ಋಷಿಮುನಿಗಳ ಭವ್ಯತೆ ನಾಡು. ಆಧ್ಯಾತ್ಮಿಕತೆಯ ಪುಣ್ಯಭೂಮಿ. ಪ್ರಾಚೀನ ಕಾಲದಲ್ಲಿ ನಮ್ಮ ದೇಶದ ಋಷಿ-ಮುನಿಗಳು, ಸಾಧು-ಸಂತರು ತಮ್ಮ ತಪಸ್ಸು, ಮನಃಶಾಂತಿ, ಭಕ್ತಿ ಮತ್ತು ಧ್ಯಾನದಲ್ಲಿ ಏಕಾಗ್ರತೆಯನ್ನು ತರಲು ಯೋಗವನ್ನು ಮಾಡುತ್ತಿದ್ದರು. ಮಾನವ ಇಂದು ಹಣದ ಗಳಿಕೆ ಮತ್ತು ಆಧುನಿಕತೆಗೆ ಬೆನ್ನು ಹತ್ತಿ ತನ್ನ ಆರೋಗ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಜೂನ್ 21, 2015ರಂದು ಮೊಟ್ಟಮೊದಲು ಭಾರತದಲ್ಲಿ ಪ್ರಾರಂಭಗೊಂಡು ನಂತರ ಅಧಿಕೃತವಾಗಿ ವಿಶ್ವಸಂಸ್ಥೆಯು ಪ್ರತಿ ವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ಕರೆಕೊಟ್ಟಿತು. ಆದ್ದರಿಂದ ಯೋಗವು ಮಾನವನ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ.
ಈ ವರ್ಷದ ಘೋಷವಾಕ್ಯ:
ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಯು ‘ಒಂದು ಭೂಮಿ ಮತ್ತು ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಮಹತ್ವಾಕಾಂಕ್ಷೆಯೊಂದಿಗೆ ವಿಶ್ವದಲ್ಲೆಡೆ ಆರೋಗ್ಯ, ಯೋಗಕ್ಷೇಮ, ಸ್ವಾಸ್ಥ್ಯ ಮತ್ತು ಜಾಗತಿಕ ಸುಸ್ಥಿರತೆಯಲ್ಲಿ ಯೋಗದ ಮಹತ್ವವನ್ನು ಸಾರುವ ಸಂದೇಶವನ್ನು ಬಿತ್ತರಿಸುತ್ತಿದೆ. ಸಮತೋಲಿತ, ಪರಿಸರ ಪ್ರಜ್ಞೆಯ ಜೀವನಕ್ಕಾಗಿ ಜನರು ಯೋಗವನ್ನು ದೈನಂದಿನ ಅಭ್ಯಾಸವನ್ನಾಗಿಸಲು ಈ ದಿನದ ಆಚರಣೆಯು ಪ್ರೋತ್ಸಾಹಿಸುತ್ತದೆ.
ಇಂದು ಮನುಷ್ಯ ಏನೆಲ್ಲವನ್ನು ಏನೆಲ್ಲ ಗಳಿಸಬಲ್ಲ ಆದರೆ ಆರೋಗ್ಯವೆಂಬ ಅಮೂಲ್ಯ ಸಂಪತ್ತನ್ನು ಪಡೆಯಲು ಯೋಗ-ಧ್ಯಾನ, ವ್ಯಾಯಾಮ, ದೈಹಿಕ ಕಸರತ್ತು ಜತೆಗೆ ಆರೋಗ್ಯ-ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಯೋಗ ಶಿಬಿರದಲ್ಲಿ ಆಯೋಜಿಸುತ್ತಿರುವ ಉತ್ತಮ ಕಾರ್ಯವಾಗಿದೆ. ಕೋವಿಡ್ ನಂತಹ ಕಾಲಘಟ್ಟದಲ್ಲಿ ಜನರು ಜೀವ-ಜೀವನ ಮತ್ತು ಆರೋಗ್ಯದ ಮಹತ್ವ ಎಷ್ಟೆಂಬುದನ್ನು ಅರಿತಿದ್ದಾರೆ. ಈ ದೇವಸ್ಥಾನದಲ್ಲಿ ಸುತ್ತಮುತ್ತಲಿನ ಜನರ ಯೋಗಕ್ಷೇಮ, ಆರೋಗ್ಯ ಮತ್ತು ಸ್ವಾಸ್ಥ್ಯಕ್ಕಾಗಿ ಯೋಗ ಶಿಬಿರವನ್ನು ಆಯೋಜಿಸುತ್ತಿರುವುದು ಆರೋಗ್ಯ ಪರವಾದ ಕಾಳಜಿಗೊಂದು ಉತ್ತಮ ನಿದರ್ಶನವಾಗಿದೆ. ಇಂದಿನ ಒತ್ತಡಮಯ ಮತ್ತು ಸಂಘರ್ಷಮಯವಾದ ಜೀವನದಲ್ಲಿ ನಾವೆಲ್ಲರೂ ಯೋಗ, ವ್ಯಾಯಾಮ ಮಾಡುವುದರ ಮೂಲಕ ಮಾನಸಿಕ ದೈಹಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು.
ಯೋಗದ ಮಹತ್ವ:
ಮನುಷ್ಯನ ಸರ್ವತೋಮುಖ ದೈಹಿಕ ಸದೃಢತೆ ಮತ್ತು ಆರೋಗ್ಯ ಸುಧಾರಣೆಯಲ್ಲಿ ಯೋಗದ ಮಹತ್ವ ಪ್ರಮುಖವಾಗಿದೆ. ಯೋಗದಿಂದ ಮನೋಬಲವನ್ನು ಹೆಚ್ಚಿಸಿ, ಜೀವನದಲ್ಲಿ ಎದರಾಗುವ ಮಾನಸಿಕ ಒತ್ತಡಗಳನ್ನು ನಿಯಂತ್ರಿಸಬಹುದು. ದೇಹದ ಸಮತೋಲನವನ್ನು ಕಾಯ್ದುಕೊಂಡು ಶಕ್ತಿ-ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಸುಸ್ಥಿರ ಆರೋಗ್ಯವನ್ನು ಹೊಂದಲು ಪ್ರಯೋಜನಕಾರಿ. ಅತಿ ಅಪಾಯಕಾರಿ ಹಾಗೂ ಮಾರಣಾಂತಿಕ ರೋಗಗಳಾದ ಹೃದಯಾಘಾತ, ಸಕ್ಕರೆ ಕಾಯಿಲೆ ಮತ್ತು ಇನ್ನಿತರ ರೋಗಗಳ ನಿವಾರಣೆಗೆ ಯೋಗವು ರಾಮಬಾಣ. ಅಷ್ಟೇ ಅಲ್ಲದೇ ಮನುಷ್ಯ-ಮನುಷ್ಯರ ನಡುವೆ ಉತ್ತಮ ಬಾಂಧವ್ಯವನ್ನು ಬೆಸೆದು ಸಾರ್ಥಕ ಬದುಕು ಸಾಗಿಸಲು ಯೋಗ ಅವಶ್ಯಕ.
ಆದರೆ ಇಂದಿನ ಆಧುನಿಕ ಯುಗದಲ್ಲಿ ಮಾನವ ದುಡಿಮೆ, ಹಣ ಗಳಿಕೆ, ಆಧುನಿಕ ಜೀವನಶೈಲಿ, ಆಹಾರ ಪದ್ಧತಿಗಳಿಂದ ತನ್ನ ಅಮೂಲ್ಯವಾದ ಆರೋಗ್ಯ ಸಂಪತ್ತನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ. ಅದರಲ್ಲಿ ಯುವ ಜನಾಂಗವಂತೂ ಮೊಬೈಲ್, ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳ ಮಿತಿಮೀರಿದ ಬಳಕೆಯಿಂದ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ ತೋರುತ್ತಿರುವುದು ತೀರಾ ಕಳವಳಕಾರಿ ಸಂಗತಿಯಾಗಿದೆ.
ಕೇವಲ ಈ ದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಿಸಿದರೆ ಸಾಲದು. ಇದು ಪ್ರತಿನಿತ್ಯದ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಂದಿಗೆ ರಾಷ್ಟ್ರದ ಸ್ವಾಸ್ಥ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸಾಗಬೇಕಾಗಿರುವುದು ಅತಿ ಅವಶ್ಯಕವಾಗಿದೆ. ಆದ್ದರಿಂದ ನಮ್ಮ ಪೂರ್ವಜರು, ಹಿರಿಯರು, ಋಷಿ-ಮುನಿ, ಸಾಧು-ಸಂತರು ನಮಗೆ ಬಳುವಳಿಯಾಗಿ ಕೊಟ್ಟ ಈ ಯೋಗದ ಮಹತ್ವವನ್ನು ಅರಿತು ನಾವು-ನೀವೆಲ್ಲಾ ಪ್ರತಿದಿನ ಮುಂಜಾವಿನ ಸಮಯದಲ್ಲಿ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು.
ಚಟುವಟಿಕೆಗಳಲ್ಲಿ ದೈಹಿಕ ಕಸರತ್ತು, ವ್ಯಾಯಾಮ, ಆಟೋಟದಂತಹ ದೈಹಿಕ ಸಕ್ರೀಯವಾಗಿ ಭಾಗವಹಿಸಿ ನಮ್ಮ ಆರೋಗ್ಯವನ್ನು ಸದೃಢ, ಸುಸ್ಥಿರ ಮತ್ತು ಸ್ವಾಸ್ಥ್ಯಯುತವನ್ನಾಗಿಸಲು ಪ್ರಯತ್ನಿಸೋಣ. ಇಂತಹ ಯೋಗ-ವ್ಯಾಯಾಮಗಳಂತಹ ನಮ್ಮ ದೇಶೀಯ ಸಂಸ್ಕೃತಿಯನ್ನು ರೂಢಿಸಿಕೊಂಡು ನಮ್ಮ ಮುಂದಿನ ಜನಾಂಗದ ಉತ್ತಮ ಆರೋಗ್ಯಕ್ಕೆ ಯೋಗದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ ತನ್ಮೂಲಕ ಈ ಭವ್ಯ ಭಾರತವನ್ನು ಸ್ವಾಸ್ಥ್ಯ ಮತ್ತು ಆರೋಗ್ಯಯುತವನ್ನಾಗಿಸಲು ನಾವೆಲ್ಲ ಕಂಕಣಬದ್ಧರಾಗೋಣ ಎಂಬುದೇ ನಮ್ಮೆಲ್ಲರ ಆಶಯವಾಗಿದೆ.
ಮಾಹಿತಿ ಕೃಪೆ: sk
ವಿಶಾಖಪಟ್ಟಣ ಬೀಚ್ ನಲ್ಲಿ 3 ಲಕ್ಷ ಜನರೊಂದಿಗೆ ಯೋಗ ಮಾಡಿ ವಿಶ್ವ ದಾಖಲೆ ಸೃಷ್ಟಿಸಿದ ಪಿಎಂ ಮೋದೀಜಿ..