Summative assessment-02: 6 ರಿಂದ 9ನೇ ತರಗತಿ ಪರೀಕ್ಷೆಗೂ ರಾಜ್ಯಮಟ್ಟದ ಪ್ರಶ್ನೆಪತ್ರಿಕೆ ಸಾಧ್ಯತೆ
Summative assessment-02: ಎಸ್ಸೆಸ್ಸೆಲ್ಸಿ ಹೊರತುಪಡಿಸಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯ ಮೌಲ್ಯಮಾಪನದ ಗೌಪ್ಯತೆ ಕಾಪಾಡಲು ಮತ್ತು ಶೈಕ್ಷಣಿಕ ಉತ್ಕೃಷ್ಟತೆ ಹೆಚ್ಚಿಸಲು ರಾಜ್ಯ ಮಟ್ಟದಿಂದಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿದ್ಧವಾಗಿದ್ದು, ಸರ್ಕಾರದ ಅಂತಿಮ ನಿರ್ದೇಶನಕ್ಕಾಗಿ ಕಾಯುತ್ತಿದೆ.
ಆಯಾ ಶಾಲಾ ಹಂತದಲ್ಲೇ ಇದುವರೆಗೆ 9ನೇ ತರಗತಿವರೆಗಿನ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿಕೊಂಡು ಪರೀಕ್ಷೆ ನಡೆಸಿ, ಮೌಲ್ಯಮಾಪನ ಮಾಡಿ ಎಲ್ಲರನ್ನೂ ತೇರ್ಗಡೆ ಮಾಡಲಾಗುತ್ತಿತ್ತು.
ಶಿಕ್ಷಣ ಹಕ್ಕು ಕಾಯ್ದೆಯಂತೆ 1ರಿಂದ 9ನೇ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಬೇಕು. ಹೀಗಾಗಿ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾತ್ರ ಮಾಡಲಾಗುತ್ತದೆ. ಇದೇ ಪದ್ಧತಿ ಮುಂದುವರಿಯುತ್ತದೆ. ಆದರೆ ಈಗ ಎಸ್ಸೆಸ್ಸೆಲ್ಸಿ ಫಲಿತಾಂಶ ಇನ್ನಷ್ಟು ಸುಧಾರಣೆಗಾಗಿ ಶಾಲಾ ಹಂತದಲ್ಲಿ ಪ್ರಶ್ನೆಪತ್ರಿಕೆ ಮತ್ತು ಮೌಲ್ಯಮಾಪನ ವಿಷಯವಾಗಿ ಒಂದಿಷ್ಟು ಕಠಿಣ ನಿಲುವು ತಳೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
“ಪ್ರಸ್ತುತ ಇರುವ ನಿಯಮದಂತೆ ಎಲ್ಲ ವಿದ್ಯಾರ್ಥಿಗಳನ್ನೂ ತೇರ್ಗಡೆ ಮಾಡಲಾಗುತ್ತದೆ.”
– ಮಧು ಬಂಗಾರಪ್ಪ | ಶಿಕ್ಷಣ ಸಚಿವ
“ರಾಜ್ಯ ಪಠ್ಯಕ್ರಮದ 6ನೇ ತರಗತಿಯಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ರಾಜ್ಯಮಟ್ಟದಿಂದಲೇ ಸಿದ್ಧಪಡಿಸಿ ನೀಡುವ ಬಗ್ಗೆ ಮಂಡಳಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರದಿಂದ ಇನ್ನೂ ಅಂತಿಮ ನಿರ್ಧಾರ ಬಂದಿಲ್ಲ.”
–ಗೋಪಾಲಕೃಷ್ಣ ಎಚ್.ಎನ್,ನಿರ್ದೇಶಕರು(ಪರೀಕ್ಷೆ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ.
1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವರ್ಷದಲ್ಲಿ ನಾಲ್ಕು ರೂಪಣಾತ್ಮಕ ಹಾಗೂ ಎರಡು ಸಂಕಲನಾತ್ಮಕ ಮೌಲ್ಯಮಾಪನ (ಪರೀಕ್ಷೆ) ಮಾಡಲಾಗುತ್ತದೆ. ಸಂಕಲನಾತ್ಮಕ ಮೌಲ್ಯಮಾಪನವನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಹಾಗೂ ಕೊನೆಯಲ್ಲಿ ನಡೆಸಲಾಗುತ್ತದೆ. ಈ ಬಾರಿ ಕೊನೆಯ ಸಂಕಲನಾತ್ಮಕ ಮೌಲ್ಯಮಾಪನಕ್ಕೆ ರಾಜ್ಯಮಟ್ಟದಿಂದಲೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ನೀಡುವ ಸಾಧ್ಯತೆಯಿದೆ. ಆದರೆ ಇನ್ನೂ ಅಂತಿಮವಾಗಿಲ್ಲ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆಯ ಸೂಚನೆ ಅನುಸಾರ ಸಂಕಲನಾತ್ಮಕ ಮೌಲ್ಯಮಾಪನದ ಅಂತಿಮ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಡಿಡಿಪಿಐ ಕಚೇರಿಯಿಂದ ಶಾಲೆಗಳಿಗೆ ಅವುಗಳ ರವಾನೆಯೂ ಆಗಿದೆ. ‘ಅದರಂತೆ ವಿಷಯವಾರು ಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಶ್ನೆಪತ್ರಿಕೆಗಳನ್ನು ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮೌಲ್ಯಮಾಪನ:
ಪ್ರಸ್ತುತ ಆಯಾ ಶಾಲಾ ಶಿಕ್ಷಕರೇ ಸಂಕಲನಾತ್ಮಕ ಮೌಲ್ಯಮಾಪನ ನಡೆಸಿ, ವಿದ್ಯಾರ್ಥಿಗಳಿಗೆ ಕಲಿಕೆಯ ಆಧಾರದಲ್ಲಿ ನಿರ್ದಿಷ್ಟ ಅಂಕ ನೀಡಿ ತೇರ್ಗಡೆ ಮಾಡುತ್ತಾರೆ. ಈ ಬಾರಿ ಮೌಲ್ಯಮಾಪನ ಗೌಪ್ಯತೆ ಕಾಪಾಡುವ ಯೋಜನೆ ಇರುವುದರಿಂದ ಹೇಗೆ ಮಾಡಲಿದ್ದಾರೆ ಎಂಬ ಕುತೂಹಲ ಶಿಕ್ಷಕರಲ್ಲೂ ಇದೆ.
